Skip to main content

ಅರೊನ್ ಸ್ವಾರ್ಟ್ಜ್:ವಿಮುಕ್ತಿ ತಂದ ತಲೆದಂಡ


     ಸಾಧನೆಗೆ ವಯಸ್ಸಿನ ಅಂತರವಿಲ್ಲ.ಹಾಗೆಯೇ ಸಣ್ಣ ಪ್ರಾಯದಲ್ಲೇ ಅಸಾಧರಣ ಸಾಧನೆ ಮಾಡಿ ಬೆರಗು ಹುಟ್ಟಿಸಿದವರು ನಮ್ಮ ನಡುವೆಯಿದ್ದಾರೆ.ಇವರಲ್ಲಿ ಅಲ್ಪಾಯುಷಿಗಳೇ ಜಾಸ್ತಿ. ಅವರ ವಿಧಿಯೇ ಹಾಗಿರುತ್ತದೋ ಏನೋ.ಗಣಕ ತಜ್ಞ,ಸಂಘಟಕ ಅರೊನ್ ಸ್ವಾರ್ಟ್ಜ್ ಕೂಡ ಅಂತರ್ಜಾಲ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸಮರ್ಥವಾಗಿ ಹೋರಾಡಿ,ತನ್ನ 26ನೇ ವಯಸ್ಸಿನಲ್ಲಿ ಇಹಲೋಕದ ಬದುಕಿಗೆ ಪೂರ್ಣ ವಿರಾಮವಿಟ್ಟು ನೆನಪಾಗಿ ಉಳಿದು ಬಿಟ್ಟಿದ್ದಾನೆ.

1986 ನವಂಬರ್ 8ರಂದು ಜನಿಸಿಇದ ಸ್ವಾರ್ಟ್ಜ್ ತಂದೆ ರಾಬರ್ಟ್ ಸ್ವಾರ್ಟ್ಜ್ ಮತ್ತು ತಾಯಿ ಸುಸಾನ್.ಬಾಲ್ಯದಿಂದಲೇ ಅಂತರ್ಜಾಲ ಸಂಸ್ಕೃತಿಗೆ ಒಗ್ಗಿ ಹೋಗಿದ್ದ.ಹಾಗಾಗಿ ಅದರಲ್ಲೇ ತನ್ನ ಆಸಕ್ತಿಯನ್ನು ಬೆಳೆಸಿಕೊಂಡ.ತನ್ನ 13ನೇ ವಯಸ್ಸಿನಲ್ಲಿ ಶೈಕ್ಷಣಿಕವಾಗಿ ಉಪಯುಕ್ತ ಜಾಲತಾಣ ನಿರ್ಮಾಣದ ಸ್ಪರ್ಧೆಯಲ್ಲಿ ಬಹುಮಾನ ಗಿಟ್ಟಿಸಿಕೊಂಡ.ಈ ಮೂಲಕ ಮಸ್ಯಾಚುಸೆಟ್ ವಿವಿಯ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳ ಭೇಟಿ ಸಾಧ್ಯವಾಯಿತು.ಅಂತರ್ಜಾಲದ ಬಗ್ಗೆ ತನಗಿದ್ದ ತೃಷೆ ನೀಗಿಸಿಕೊಳ್ಳಲು ಅನುವಾಯಿತು.ಅಂತರ್ಜಾಲದಲ್ಲಿನ ಮಾಹಿತಿ ಎಲ್ಲರಿಗೂ ಮುಕ್ತವಾಗಿ ದೊರಕುವಂತಾಗಬೇಕೆಂಬ ದಿಟ್ಟ ನಿರ್ಧಾರದ ಜೊತೆ ಕಾರ್ಯೋನ್ಮುಖನಾದ.ಫಲವಾಗಿ 14ನೇ ವಯಸ್ಸಿನಲ್ಲೇ ಜಾಲತಾಣ ಮತ್ತು ಬ್ಲಾಗ್ ಗಳಲ್ಲಿನ ಹೊಸ ಬದಲಾವಣೆಗಳ ಮಾಹಿತಿಯನ್ನು ಪಡೆಯಲಿರುವ RSS feed(Rich Site Summary)ನ ತಂತ್ರಾಂಶ ನಿರ್ಮಾಣದಲ್ಲಿ ಕೈಜೋಡಿಸಿದ.ಇದೇ ಅಂತರ್ಜಾಲ ವಾಕ್ ಸ್ವಾತಂತ್ರ್ಯದ ತನ್ನ ಅಭಿಯಾನಕ್ಕೆ ಮುನ್ನುಡಿಯಾಯಿತು.ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಅಂತರ್ಜಾಲದ ಉಪಯೋಗ ಮತ್ತು ಹಕ್ಕುಸ್ವಾಮ್ಯ ಹೇರುವುದರಿಂದ ಮಾಹಿತಿ ವಿನಿಯೋಗಕ್ಕೆ ಅಡ್ಡಿಯಾಗುವುದರ ಕುರಿತು ಸಾಮಾಜಿಕ ಮತ್ತು ನಾಗರಿಕ ಪ್ರಜ್ಞೆ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ.ಇನ್ಫೋಗಾಮಿ ಎಂಬ ಕಂಪನಿ ಸ್ಥಾಪಿಸಿ,ನಂತರ ರೆಡಿಟ್(Reddit) ಎಂಬ ಸಾಮಾಜಿಕ ಜಾಲತಾಣದ ಜೊತೆ ವಿಲೀನಗೊಳಿಸಿದ.ಇಲ್ಲಿ ಬಳಕೆದಾರರು ತಮ್ಮ ಅಭಿರುಚಿಯ ವಿಷಯಗಳನ್ನು ಹಂಚಿಕೊಳ್ಳುವ ವ್ಯವಸ್ಥೆಯಿದೆ.ಇಂದಿಗೂ ‘ಅಂತರ್ಜಾಲದ ಮುಖಪುಟ’ವೆಂಬ ಅಡಿಬರಹದ ರೆಡಿಟ್ ಜನಪ್ರಿಯತೆಯನ್ನು ಕಾಯ್ದುಕೊಂಡು ಬಂದಿದೆ.’ಓಪನ್ ಲೈಬ್ರರಿ’ ಎಂಬ ಯೋಜನೆಯ ಮೂಲಕ ಪ್ರಕಟಿತ ಪುಸ್ತಕಗಳನ್ನು ಮುಕ್ತವಾಗಿ ಲಭಿಸುವಂತೆ ಮಾಡಿದ.

2010ರಲ್ಲಿ ಹಾವರ್ಡ್ ವಿವಿಯಲ್ಲಿ ಸಂಸ್ಥೆಗಳಲ್ಲಿ ನಡೆಯುವ ಭ್ರಷ್ಟಾಚಾರಗಳ ಕುರಿತು ನೀತಿಶಾಸ್ತ್ರದ ಅಧ್ಯಯನ ನಡೆಸಿದ.ಮಾಹಿತಿ ಪೂರೈಕೆಗಾಗಿ ಹಣದ ಹೊಳೆ ಹರಿಯುವುದನ್ನು ತಡೆಗಟ್ಟಲು ಕಾರ್ಯತಂತ್ರ ರೂಪಿಸಿದ.ಇದಕ್ಕಾಗಿ ಡಿಮಾಂಡ್ ಪ್ರೊಗ್ರೆಸ್(Demand Progress) ಎಂಬ ಪ್ರಗತಿಶೀಲ ಪ್ರತಿಪಾದನಾ ಸಂಘಟನೆಯನ್ನು ಹುಟ್ಟು ಹಾಕಿದ.ಜನರನ್ನು ಮಿಂಚಂಚೆ ಮತ್ತು ಮಾಧ್ಯಮಗಳ ಮೂಲಕ ಒಟ್ಟುಗೂಡಿಸಿ ನಿರ್ದಿಷ್ಟ ವಿಚಾರದ ಕುರಿತು ಜಾಗೃತಿ ಮೂಡಿಸುವುದು ಇದರ ಮೂಲ ಧ್ಯೇಯ.ಸಂಯುಕ್ತ ಸಂಸ್ಥಾನದ ಶಾಸಕಾಂಗ ಪ್ರಸ್ತಾಪಿಸಿದ SOPA(Stop Online Piracy Act) ಮತ್ತು PIPA(PROTECT IP Act) ಎಂಬ ಎರಡು ಕಾಯ್ದೆಗಳ ವಿರುದ್ಧ ಡಿಮಾಂಡ್ ಪ್ರೊಗ್ರೆಸ್ ಸಿಡಿದೆದ್ದಿತು.ಈ ಕಾಯ್ದೆಗಳ ವಿಧೇಯಕವು ಅಂತರ್ಜಾಲದಲ್ಲಿನ ಮಾಹಿತಿಗಳ ಮೇಲಿನ ಹಕ್ಕುಸ್ವಾಮ್ಯಗಳನ್ನು ಬಲಪಡಿಸುವ ಮತ್ತು ಕೃತಿಚೌರ್ಯದ ಉಲ್ಲಂಘನೆಯನ್ನು ಹತ್ತಿಕ್ಕುವ ಉದ್ದೇಶ ಹೊಂದಿತ್ತು.ಆದರೆ ಅಂತರ್ಜಾಲಕ್ಕೆ ಇಷ್ಟೊಂದು ನಿರ್ಬಂಧಗಳನ್ನು ಹೇರಿದರೆ ಜನ ಸ್ನೇಹಿಯಾಗಿ ಉಳಿಯುವುದು ಕಷ್ಟ ಮತ್ತು ನ್ಯಾಯ ಸಮ್ಮತವೂ ಅಲ್ಲವೆಂಬ ವಾದಕ್ಕೆ ಪೂರ್ಣ ಬಹುಮತ ಸಿಕ್ಕಿತು.ಕಳೆದ ವರ್ಷ ಜನವರಿ 18ರಂದು ಕಾಯ್ದೆ ಖಂಡಿಸಿ ಸರಣಿ ಪ್ರತಿಭಟನೆಗಳು ನಡೆದವು.ಪ್ರತಿಷ್ಠಿತ ಗೂಗಲ್,ವಿಕಿಪೀಡಿಯಾ,ಮೊಜಿಲ್ಲಾ,ಫ್ಲಿಕರ್ ಗಳು ತಮ್ಮ ಸೇವೆಯನ್ನು ರದ್ದುಪಡಿಸಿ ಕರಾಳ ದಿನವನ್ನಾಗಿ ಆಚರಿಸಿದವು.ಕೊನೆಗೂ ಕಾಯ್ದೆ ರದ್ದಾಯಿತು.






‘ಮಾಹಿತಿಯೇ ಶಕ್ತಿ’ ಎಂಬ ಮಂತ್ರ ಪಠಿಸಿದ್ದ ಸ್ವಾರ್ಟ್ಜ್,ಅಂತರ್ಜಾಲದಲ್ಲಿ ಮಾಹಿತಿ ಹಂಚಿಕೊಳ್ಳುವುದು ಒಂದು ನೈತಿಕ ಹಕ್ಕು ಎಂದಿದ್ದ.ಕನ್ನಡಿಯೊಳಗಿನ ಗಂಟಾಗಿರದೆ ಎಲ್ಲವೂ ಎಲ್ಲರಿಗೂ ಉಚಿತವಾಗಿ ಪ್ರಾಪ್ತವಾಗಬೇಕು. ಅಲ್ಲದೇ,ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ತಂತ್ರಜ್ಞಾನದ ಲೇಪನವಾಗಿರುವಾಗ ಮಾಹಿತಿಯನ್ನು ನಿಲುಕದ ದ್ರಾಕ್ಷಿಯಂತೆ ಮಾಡದೇ ಮುಕ್ತವಾಗಿಸಬೇಕೆಂಬ ಅಭಿಪ್ರಾಯ ಪಟ್ಟಿದ್ದ.ವಸ್ತುಗಳು ಕಳವಾದರೆ ಮತ್ತೆ ಸಿಗುವುದಿಲ್ಲ.ಆದರೆ ಉತ್ತಮ ವಿಚಾರಧಾರೆಗಳು ಕಳವಾದರೆ ಅಥವಾ ಹಂಚಿ ಹೋದರೆ ಸಾಮಾಜಿಕ,ಕೈಗಾರಿಕಾ,ಆರ್ಥಿಕ ಕ್ರಾಂತಿಗೆ ಕಾರಣವಾಗಬಹುದು.ಹೆಚ್ಚು-ಹೆಚ್ಚು ಮಾಹಿತಿಗಳನ್ನು ಕಲೆ ಹಾಕಿ ವಿತರಿಸುವುದರಿಂದ ಬದಲಾವಣೆಗಳನ್ನು ಕಲ್ಪಿಸಲು ಸಾಧ್ಯ.ಎಲ್ಲಿಂದ ಎಲ್ಲಿಗೋ ಸಂಪರ್ಕ ಬೆಳೆಸುವ ಕಂಪ್ಯೂಟರ್ ಯುಗದಲ್ಲಿ ನಕಲು,ಕೃತಿಚೌರ್ಯ ಸರ್ವೇ ಸಾಮಾನ್ಯ.ಕಳೆದ 20 ವರ್ಷಗಳಿಂದೀಚೆಗೆ ಅನೇಕ ಪುಸ್ತಕ ಪ್ರಕಾಶಕರು,ಧ್ವನಿ ಮುದ್ರಣ ಸಂಸ್ಥೆಗಳು ಇದರ ಲಾಭ/ನಷ್ಟ ಅನುಭವಿಸಿದ್ದಾರೆ.ಈ ನಿಟ್ಟಿನಲ್ಲಿ ಮಾಹಿತಿಯನ್ನು ಇತಿಮಿತಿಯೊಳಗೆ ಹಂಚುವ ಉದ್ದೇಶದಿಂದ ಪ್ರಾರಂಭವಾದ ಕ್ರಿಯೇಟಿವ್ ಕಾಮನ್ಸ್(Creative Commons) ಸಂಘಟನೆಯ ಸ್ಥಾಪಕ ಸದಸ್ಯರಲ್ಲಿ ಸ್ವಾರ್ಟ್ಜ್ ಕೂಡ ಒಬ್ಬನಾಗಿದ್ದ.

ಬಂಡವಾಳಶಾಹಿಗಳ ಮತ್ತು ರಾಜಕಾರಣಿಗಳ ಕಟು ಧೋರಣೆಗಳನ್ನು ಧಿಕ್ಕರಿಸಿಕೊಂಡು ಬಂದಿದ್ದ ಸ್ವಾರ್ಟ್ಜ್,ಇದನ್ನು ಸಹಿಸದೆ ಕಾನೂನಿನ ಚೌಕಟ್ಟು ಮೀರಿ ಎರಡು ಪ್ರಮುಖ ಅಪರಾಧಗಳಲ್ಲಿ ಭಾಗಿಯಾದ.
1.ಸಂಯುಕ್ತ ಸಂಸ್ಥಾನದ ಫೆಡರಲ್ ನ್ಯಾಯಾಲಯದಲ್ಲಿ ಸಾರ್ವಜನಿಕರ ಉಪಯೋಗಕ್ಕಿರುವ ವಿದ್ಯುನ್ಮಾನ ಕಡತಗಳಿಗೆ(PACER-Public Access to Court Electronic Records) ಶುಲ್ಕ ಪಾವತಿ ಮಾಡಬೇಕಿತ್ತು.ಸ್ವಾರ್ಟ್ಜ್ ಮತ್ತು ಸಮಾನ ಮನಸ್ಕರು ಸರ್ಕಾರಿ ಕಡತಗಳಿಗೆ ಹಕ್ಕುಸ್ವಾಮ್ಯವಿಲ್ಲದಿದ್ದರೂ ಜನರಿಂದ ಹಣ ಕಬಳಿಸುತ್ತಿದ್ದುದನ್ನು ಮನಗಂಡರು.ಇದಕ್ಕಾಗಿ ಫೆಡರಲ್ ಕೋರ್ಟ್ನ 17 ಗ್ರಂಥಾಲಯಗಳಿಂದ ಸುಮಾರು 2 ಕೋಟಿ ಪುಟಗಳಷ್ಟು ಮಾಹಿತಿಯನ್ನು ಸ್ವಾರ್ಟ್ಜ್ ಅಕ್ರಮವಾಗಿ ಕಸಿದುಕೊಂಡ.FBIಯಿಂದ ವಿಚಾರಣೆಗೊಳಗಾದರೂ ಸೂಕ್ತ ಸಾಕ್ಷ್ಯವಿಲ್ಲದೆ ಪ್ರಕರಣ ಖುಲಾಸೆಯಾಯಿತು.
2.ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನಾ ಪ್ರೌಢ ಪ್ರಬಂಧಗಳು ಸಾರ್ವಜನಿಕವಾಗಿ ಲಭಿಸುತ್ತಿಲ್ಲವೆಂಬ ಕೂಗು ಕೇಳಿಬಂತು.JSTOR (Journal STORAGE) ಎಂಬುದು ಒಂದು ಡಿಜಿಟಲ್ ಲೈಬ್ರರಿ.ಇಲ್ಲಿ ಸುಮಾರು 7000 ವಿವಿಗಳ ಶೈಕ್ಷಣಿಕ ಪ್ರಬಂಧಗಳ ಸಂಗ್ರಹವಿದೆ.ಸ್ವಾರ್ಟ್ಜ್ ಮಸ್ಯಾಚುಸೆಟ್ ವಿವಿಗೆ ಸಂಬಂಧಪಟ್ಟ ಸುಮಾರು 4 ಮಿಲಿಯ ಶೈಕ್ಷಣಿಕ ಸಂಚಿಕೆಗಳನ್ನು ಅಕ್ರಮವಾಗಿ ಕದ್ದಿರುವುದು ಹಲವರ ಕೆಂಗಣ್ಣಿಗೆ ಗುರಿಯಾಯಿತು.ಜುಲೈ 19,2011ರಂದು ವಿವಿ ಪರ ವಕೀಲ ಕಾರ್ಮೆನ್ ಓರ್ಟ್ಸ್ Computer Fraud and Abuse Act ಅಡಿಯಲ್ಲಿ ಕಾನೂನು ಕ್ರಮಕ್ಕೆ ಸ್ವಾರ್ಟ್ಜ್ ನು ಒಳಪಡಿಸಿದ.ಆದರೆ ಸ್ವಾರ್ಟ್ಜ್ ಶರಣಾಗಿದ್ದರಿಂದ ಜಾಮೀನಿನ ಮೇಲೆ ಬಿಡುಗಡೆಯಾದ.JSTOR ಉಚಿತವಾಗಿ ತನ್ನ ಮಾಹಿತಿಯನ್ನು ಹಂಚದೆ ಮೋಸ ಮಾಡುತ್ತಿದೆಯೆಂಬ ಕಾರಣಕ್ಕೆ ಸ್ವಾರ್ಟ್ಜ್ ಈ ಕೃತ್ಯ ಎಸಗಿದ್ದ.

ಪ್ರಕರಣದ ವಿಚಾರಣೆ ಮಾಡಿದ ಫೆಡರಲ್ ನ್ಯಾಯಾಲಯ ತನ್ನ ತೀರ್ಪನ್ನು ನೀಡಿತು.ಈ ಪ್ರಕಾರ ಸ್ವಾರ್ಟ್ಜ್ ಗೆ 35  ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ದಂಡ ವಿಧಿಸಲಾಗಿತ್ತು.ಅಷ್ಟೇ ಅಲ್ಲದೆ ಆರೋಪ ಪಟ್ಟಿಯನ್ನು 4ರಿಂದ 13ಕ್ಕೆ ಏರಿಸಲಾಗಿತ್ತು.ಸ್ವಾರ್ಟ್ಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ವಜಾವಾಯಿತು.ದುರಂತವೆಂದರೆ,ಇದಾದ ಎರಡು ದಿನಗಳಲ್ಲಿ ಅಂದರೆ ಜನವರಿ 11,2013ರಂದು ತಾನಿದ್ದ ಕೊಠಡಿಯಲ್ಲಿ  ಆತ್ಮಹತ್ಯೆಗೆ ಶರಣಾದ.ವೈಯುಕ್ತಿಕ ಕಾರಣಗಳಿಂದ ಜೀವ ತೆಗೆದುಕೊಂಡ ಎಂದು ದಾಖಲು ಮಾಡಿದರೂ,ಫೆಡರಲ್ ನ್ಯಾಯಾಲಯದ ತೀರ್ಪು ಮುಳುವಾಗಿ ಪರಿಣಮಿಸಿರಬೇಕೆಂದು ಸಮರ್ಥಿಸಿಕೊಂಡರೂ ತಪ್ಪಿಲ್ಲ.ಸ್ವಾರ್ಟ್ಜ್ ಉಚಿತ ಮತ್ತು ಸಮಾನವಾಗಿ ಮಾಹಿತಿಯ ಪೂರಣಕ್ಕೆ ಅಂತರ್ಜಾಲವನ್ನು ವಾಹಿನಿಯಾಗಿ ಬಳಸಿಕೊಂಡ.ಖಾಸಗೀಕರಣದ ವಿರುದ್ಧ ‘Private Theft On Public Culture’ ಎಂದು ಜರಿದಿದ್ದ.ಮಾಹಿತಿಯ ಹರಿವಿನಲ್ಲಿರುವ ಅಸಮಾನತೆಯ ಕುರಿತು ಜಗತ್ತಿಗೇ ತಿಳಿಹೇಳಿದ ಒಬ್ಬ ಅಪ್ರತಿಮ ಸಾಧಕನನ್ನು ಕಳೆದುಕೊಂಡಿದ್ದೇವೆ.ಅನೇಕ ಲೇಖಕರು ತಮ್ಮ ಹಕ್ಕುಸ್ವಾಮ್ಯದ pdf(portable document format) ಕೃತಿಗಳನ್ನು ಅಂತರ್ಜಾಲದಲ್ಲಿ ಮುಕ್ತವಾಗಿಸಿ ಶ್ರದ್ಧಾಂಜಲಿ ಸಲ್ಲಿಸಿದರು.ಒಂದು ವೇಳೆ ಅಂತರ್ಜಾಲಕ್ಕೆ ಆಲೋಚನೆ ಮಾಡುವ ಶಕ್ತಿಯಿರುತ್ತಿದ್ದರೆ ಸ್ವಾರ್ಟ್ಜ್ ಸಾವಿನಿಂದ ದುಃಖ ತಪ್ತವಾಗುತ್ತಿತ್ತು.
    ಕೃಪೆ: ಸಂಚಯ.ನೆಟ್ 

Creative Commons License
ದೀವಟಿಗೆ by ಸಂದೀಪ ಫಡ್ಕೆ, ಮುಂಡಾಜೆ is licensed under a Creative Commons Attribution-NonCommercial-NoDerivs 2.5 India Licens

Comments

Popular posts from this blog

ಯುವ ಜನತೆ ಮತ್ತು ಸಾಮಾಜಿಕ ತಾಣಗಳು

        ಸಂ ಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.        ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.ಇದರಲ್ಲಿ ಒಂದಷ್ಟು ಸತ್ಯವಿದೆ.ದಿನದ ಸುಮಾರು

ಮಾದಕ ಅಧ್ವಾನ

ಧೂ ಮಪಾನ, ಮದ್ಯಪಾನದಂತೆ ಮಾದಕ ದ್ರವ್ಯ ಸೇವನೆಯ ಚಟ ಹೊಸ ತಲೆಮಾರಿನ ಯುವಕ/ಯುವತಿಯರಲ್ಲಿ ವಿದೇಶಿ ಮೋಹದಂತೆ ಸದ್ದಿಲ್ಲದೆ ಹರಡುತ್ತಿದೆ. ಷೋಕಿಗಾಗಿ, ದೈಹಿಕ ಮತ್ತು ಮಾನಸಿಕ ನೋವಿನಿಂದ ಕೆಲ ಕ್ಷಣ ದೂರವಾಗಲು ಇದರ ಬಳಕೆಯಾಗುತ್ತಿದೆ. ಇದಕ್ಕೆ ದಾಸರಾಗುವವರಲ್ಲಿ ಹೆಚ್ಚಿನವರು 18 ರಿಂದ 30 ವರ್ಷದೊಳಗಿನವರು. ಜಗತ್ತಿನೆಲ್ಲೆಡೆ ಸುಮಾರು 500 ಬಿಲಿಯನ್ ಮೊತ್ತದ ಮಾದಕ ವಸ್ತುಗಳ ವಹಿವಾಟು ನಡೆಯುತ್ತದೆ. ಪೆಟ್ರೋಲಿಯಂ ಮತ್ತು ಶಸ್ತ್ರಾಸ್ತ್ರ ಉದ್ದಿಮೆಯ ನಂತರದ ಸ್ಥಾನ ದಕ್ಕಿದೆ! ಪ್ರತಿಷ್ಠೆ ಎಂದುಕೊಂಡಿರುವ ಯುವ ಜನಾಂಗದ ಮೊಂಡುತನ, ಸಾವಿನ ಬಾಗಿಲು ತಟ್ಟುವಂತೆಯೂ ಮಾಡಿದೆ. ದೇಶದಲ್ಲಿ ಸುಮಾರು ಒಂದು ಕೋಟಿ ಹೆರಾಯಿನ್ ವ್ಯಸನಿಗಳಿದ್ದಾರೆ. ಕೆಲ ತಿಂಗಳ ಹಿಂದೆ, ಮಂಗಳೂರಿನ ವಿದ್ಯಾರ್ಥಿನಿಯೋರ್ವಳು ಈ ದುಷ್ಚಟಕ್ಕೆ ಬಲಿಯಾದ ಘಟನೆ ನಮ್ಮ ಮುಂದಿದೆ. ನೆರೆಯ ಪಾಕಿಸ್ತಾನದಿಂದ ಇದರ ವ್ಯವಸ್ಥಿತ ಸರಬರಾಜು ನಡೆಯುತ್ತಿದೆ ಎಂಬ ಗುಮಾನಿಯೂ ಇದೆ. ಅದರಲ್ಲೂ ಕರಾವಳಿ ಪ್ರದೇಶ ವಾಮಮಾರ್ಗ ಕರುಣಿಸಿ ಡ್ರಗ್ ಮಾಫಿಯಾಕ್ಕೆ ತೆರೆದುಕೊಂಡಿದೆ. ಹಾಗಿದ್ದರೆ, ಡ್ರಗ್ಸ್ ಅಥವಾ ಮಾದಕ ವಸ್ತುಗಳ ಕುರಿತಾದ ಪಕ್ಷಿ ನೋಟ ಇಲ್ಲಿದೆ. ಮಾನಸಿಕ ಮತ್ತು ದೈಹಿಕ ಬದಲಾವಣೆಗೆ ಕಾರಣವಾಗುವ ವಸ್ತುಗಳಿಗೆ ಮಾದಕ ವಸ್ತು ಎನ್ನಲಾಗುತ್ತದೆ. ಇದು ಘನ, ದ್ರವ ಅಥವಾ ಅನಿಲ ರೂಪದಲ್ಲಿರುತ್ತದೆ. ವ್ಯಕ್ತಿಯ ನರಮಂಡಲದ ಮೇಲೆ ಪ್ರಭಾವ ಬೀರುವ ಮೂರು ಮುಖ್ಯ ಮಾದಕ ವಸ್ತುಗಳ ವಿಧಗಳು: ಡಿಪ

ಒಂದು ಸಾಲಿನ ಕತೆ

ಒಂದೇ ಸಾಲಿನಲ್ಲಿ ಉತ್ತರಿಸಲಾಗದು ಬದುಕೆಂಬ ಕ್ಲಿಷ್ಟ ಪ್ರಶ್ನೆ ಪತ್ರಿಕೆಗೆ. ಆಕಾಶಕ್ಕೆ ಏಣಿ ಇಟ್ಟಂತೆ, ಜೀವಮಾನವೇ ಜಾರಿ ಹೋಗುತ್ತದೆ. ದಿನ, ವಾರ, ತಿಂಗಳು ಕೊನೆಗೆ ಸಾಲು ಸಾಲಾಗಿ. ಪರಿವೆಯೇ ಇಲ್ಲದೆ ಕಳೆದುಹೋಗುತ್ತವೆ, ರಾತ್ರಿ ಬೆಳಗಾದಂತೆ ಸಾಲುಗಳು! ಈ ಸಾಲಿನಲ್ಲಿ ಆಗದ್ದು, ಮುಂದಿನ ಸಾಲಿನಲ್ಲಿ ಮಾಡುವ ಇರಾದೆ, ಪ್ರೌಢಿಮೆಯ ಭ್ರಮೆ ಮೈಮನವಿಡೀ ಹಬ್ಬುತ್ತದೆ, ಕಾಲಾಂತರ ಕಡೆಗಣಿಸಿ. ದಿನ ಎಣಿಸಿ, ಗುಣಿಸಿ, ಭಾಗಿಸುವಷ್ಟರಲ್ಲಿ ಆ ಸಾಲೂ ತುಳಿದಿರುತ್ತದೆ ನಿರ್ಗಮನದ ಹಾದಿ. ಮನಸ್ಸು ಮರುಗುತ್ತದೆ ಸಾಲು ಸಾಲುವುದಿಲ್ಲವೆಂದು. ಖಾಲಿ ಕೈಯಲ್ಲಿ ಬಂದು ಹೋಗುವ ನಮಗೂ, ಸಾಲುಗಳಿಗೂ ವ್ಯತ್ಯಾಸವಿಲ್ಲ. ಇಪ್ಪತ್ತೈದರ ಗುಣಾಕಾರದ ಹಬ್ಬಗಳಿಗೆ ಯಾವ ಸಾಲಿನ ಹಂಗಿಹುದೋ ಜಾಸ್ತಿ ? ಸಾಧನೆ, ಪ್ರತಿಷ್ಠೆಯ ಬೆಂಬತ್ತುವ ನಾವು ಸಾಲುಗಳ ಸಾಲಗಾರರಲ್ಲವೆ ? ನೋಡು-ನೋಡುತ್ತಿದ್ದಂತೆ ಮತ್ತೆ ಬಂದೆರಗುತ್ತದೆ, ಯಾವ ಭಕ್ಷೀಸನ್ನೂ ಬೇಡದೆ ಹೊಸ ಸಾಲು, ಹೊಸ ಸವಾಲು, ಹೊಸ ಅಹವಾಲು..!! (ಕೃಪೆ : ಕನ್ನಡ ಪ್ರಭ ) Deevatige by Sandeep Phadke is licensed under a Creative Commons Attribution-NonCommercial 4.0 International License . Based on a work at http://www.deevatige.blogspot.in/ .