Skip to main content

ಹೊಸ ವರ್ಷ ಬಂತೂ


          ಯಾಕೋ ಬೆಳಿಗ್ಗಿನಿಂದಲೇ ಮೈ-ಮನಸ್ಸು ಸರಿಯಿಲ್ಲ. ಸಾವಿನ ಮನೆಯ ಹಾಗೆ ಮೌನ ಆವರಿಸಿದೆ. ಇಷ್ಟು ದಿನ ಇಲ್ಲದ ಚಂಚಲತೆ ಇವತ್ತು ಗಿರಕಿ ಹೊಡೆಯುವಂತೆ ಮಾಡಿದೆ. ದೇಹಾಲಾಸ್ಯವೇನಿಲ್ಲ. ಏನೋ ಒಂದು ರೀತಿಯ ಭಯ, ಆತಂಕ ಹೇಳದೆ ಕೇಳದೆ ನೆಲೆ ನಿಂತಿದೆ. ವರ್ಷವಿಡೀ ಯೋಜನೆ ಹಾಕುವುದರಲ್ಲೇ ಕಳೆದು ಹೋಯಿತಲ್ಲವೆಂಬ ಪಾಪಪ್ರಜ್ಞೆ ಬೇರೆ ಕಾಡುತ್ತಿದೆ. ಕೊನೆಯ ದಿನದ ಅನುಭವ ಈ ತರಹವಾಗಬಹುದೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಇಂದಿನ ಪತ್ರಿಕೆ ನಾಳಿನ ರದ್ದಿಯಾಗುವ ಹಾಗೆ ನನ್ನ ಜೊತೆಗಿರುವ ನೆನಪುಗಳು, ಸಂಬಂಧಗಳು, ವಸ್ತುಗಳು ನಾಳೆಗೆ ಹಳೆಯದಾಗಿ ಕಳಾಹೀನವಾದಂತೆ ಕಂಡರೆಂಬ ಕಳವಳ ಶುರುವಾಗಿದೆ. ಇಲ್ಲ, ಹಾಗಾಗಲು ಬಿಡಬಾರದು. ಇವೆಲ್ಲವನ್ನು ಮುಂದಿನ ವರ್ಷಕ್ಕೆ ಜೋಪಾನವಾಗಿ ಸಾಗಿಸಬೇಕು. ಹೊಸ ವರ್ಷಕ್ಕೆ ‘ಹೊಸತು’ ನನ್ನ ಹತ್ತಿರಕ್ಕೆ ಸುಳಿಯದಂತೆ ನಿಗಾವಹಿಸಬೇಕೆಂದು ಶಪಥ ಮಾಡಿದ್ದೇನೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಒಂದು ಸಾಲು ಇತಿಹಾಸದ ಪುಟ ಸೇರಲಿದೆ.

          ಕತ್ತಲು ಕವಿದಂತೆ ಬೀದಿ ದೀಪಗಳು ಮಂದವಾಗಿ ಬೆಳಕು ಚೆಲ್ಲುತ್ತಿವೆ. ರಸ್ತೆಯುದ್ದಕ್ಕೂ ಹೊಸ ವರ್ಷಾಚರಣೆಯ ಬಿರುಸು ಆರಂಭವಾಗಿದೆ. ಇಷ್ಟೊಂದು ಖುಷಿ ಪಡುವ ವಿಚಾರೇನಿದೆ? ಅರ್ಥವೇ ಆಗುತ್ತಿಲ್ಲ. ನಾನಂತೂ ನಾಲ್ಕು ಗೋಡೆಗಳ ಮಧ್ಯೆ ರಾತ್ರಿ ಕಳಿಯಬೇಕೆಂದು ನಿರ್ಧರಿಸಿದ್ದೇನೆ. ಮೊನ್ನೆ ಪ್ರಳಯವಾಗುತ್ತದೆಂದು ಹೆದರಿಸಿದಾಗಲೂ ನನ್ನಲ್ಲಿ ಈ ತರಹ ವ್ಯತಿರಿಕ್ತ ಬದಲಾವಣೆಗಳು ಉಂಟಾಗಿರಲಿಲ್ಲ. ಹೊಸ ಸವಾಲುಗಳನ್ನು, ಅಡ್ಡಿ-ಆತಂಕಗಳನ್ನು ಎದುರಿಸುವುದು ಹೇಗೆ ಎಂಬ ಚಿಂತೆ ಕೂತಲ್ಲಿ ಕೂರಲು ಬಿಡುತ್ತಿಲ್ಲ. ಚಡಪಡಿಕೆ ಜಾಸ್ತಿಯಾಗಿದೆ. ಇಷ್ಟು ವರ್ಷಗಳಿಂದ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಇದೇ ಮೊದಲು. ಹೊಸ ವರ್ಷವನ್ನು ಆಹ್ವಾನಿಸುವುದೆಂದರೆ ಬೂದಿ ಮುಚ್ಚಿದ ಕೆಂಡದ ಮೇಲೆ ಕೈ ಇಟ್ಟ ಹಾಗೆಯೇ ಅಲ್ಲವೇ? ನನ್ನ ಪರಿಸ್ಥಿತಿ ತವರು ಮನೆ ಬಿಟ್ಟು ಬರುವ ಮಗಳ ವೇದನೆಯಂತಾಗಿದೆ. ವಿದಾಯದ ನೋವು ನುಂಗುತ್ತಾ ನನ್ನದೇ ಪ್ರಪಂಚದಲ್ಲಿ ವಿಹರಿಸುತ್ತಿದ್ದೇನೆ. ಹೊರಗಡೆ ದೊಂಬಿ ಹೆಚ್ಚಾಗಿದೆ. ಬಾಗಿಲು, ಕಿಟಕಿಗಳನ್ನು ಭದ್ರವಾಗಿ ಮುಚ್ಚಿದ್ದೇನೆ. ಆದರೂ ಬೊಬ್ಬಿಡುವ ಜನರ ಕೂಗು ಅಶರೀರ ವಾಣಿಯಂತೆ ಕೇಳಿಸುತ್ತಿದೆ. ಯಾರೋ ಕರೆದ ಹಾಗೆ, ಬಾಗಿಲು ತಟ್ಟಿದ ಹಾಗೆ ಅನಿಸಿದೆ. ಬಹುಶಃ ನನ್ನ ಗೆಳೆಯರೇ ಇರಬೇಕು. ಆ ಎಣ್ಣೆ ಬಾಟಲಿಗಳ ಜೊತೆ ಮೈಮರೆತು ಕುಣಿಯುವುದು ಸುತರಾಂ ಇಷ್ಟವಿಲ್ಲ. ನಾಳೆಯನ್ನು ನೋಡುವ ಕೌತುಕ ಜಾಗೃತವಾಗಿದೆ. ನಡು ರಾತ್ರಿಯಾಗಲು ನಿಮಿಷಗಳಷ್ಟೇ ಬಾಕಿಯಿವೆ. ಮಲಗಿದರೆ ನಿದ್ದೆಯೂ ಹತ್ತುತ್ತಿಲ್ಲ. ಟಿ.ವಿ.ಯಲ್ಲಿ ವರ್ಷದ ‘ಫ್ಲಾಷ್ ಬ್ಯಾಕ್’ನದೇ ಸುದ್ದಿ. ತಾನೇನು ಕಡಿಮೆಯೆಂಬಂತೆ ಗಾಳಿಗೆ ತೂರಾಡುತ್ತಿರುವ ಕ್ಯಾಲೆಂಡರ್ ಎಲ್ಲ ತಿಂಗಳುಗಳನ್ನು ರಪರಪನೆ ತೆರೆಯುತ್ತಾ ನನ್ನ ಹಿನ್ನೋಟವನ್ನು ನೆನಪಿಸಿದೆ. ಈ ನೆನಪುಗಳ ಜಾಡು ಹಿಡಿದು ಹೋದ ನನಗೆ ಸದ್ದಿಲ್ಲದೆ ಹೊಸ ವರ್ಷಕ್ಕೆ ಅಡಿಯಿಟ್ಟಿರುವುದು ಗೊತ್ತೇ ಆಗಲಿಲ್ಲ. ಆದರೆ ಮನಸ್ಸು ಮತ್ತೆ ವಿಭ್ರಾಂತವಾಗಿದೆ. ಧೈರ್ಯದಿಂದ ಬಾಗಿಲು ತೆರೆದೆ. ನೀರವತೆಯಲ್ಲಿ ಮಿಂದಿರುವ ಊರಲ್ಲಿ ಹೊಸತೇನೂ ಕಾಣುತ್ತಿಲ್ಲ. ಯಾವ ರೂಪಾಂತರಗಳೂ ಆಗಿಲ್ಲ. ಹಾಗಾದರೆ, ಹೊಸ ವರ್ಷ ಬರೀ ಕ್ಯಾಲೆಂಡರಿಗಷ್ಟೇ ಸೀಮಿತವೇ? ಛೆ, ಇದೆಂತಹ ಮೋಸ! ನನ್ನ ಕಾಲ್ಪನಿಕ ಜಗತ್ತು ಟಿಸಿಲೊಡೆದು ನೈಜತೆಯತ್ತ ಮರಳಿತು.

Creative Commons License
ದೀವಟಿಗೆ by Sandeep Phadke is licensed under a Creative Commons Attribution-NonCommercial-NoDerivs 2.5 India License.

Comments

Popular posts from this blog

ಯುವ ಜನತೆ ಮತ್ತು ಸಾಮಾಜಿಕ ತಾಣಗಳು

        ಸಂ ಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.        ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.ಇದರಲ್ಲಿ ಒಂದಷ್ಟು ಸತ್ಯವಿದೆ.ದಿನದ ಸುಮಾರು

ಮಾದಕ ಅಧ್ವಾನ

ಧೂ ಮಪಾನ, ಮದ್ಯಪಾನದಂತೆ ಮಾದಕ ದ್ರವ್ಯ ಸೇವನೆಯ ಚಟ ಹೊಸ ತಲೆಮಾರಿನ ಯುವಕ/ಯುವತಿಯರಲ್ಲಿ ವಿದೇಶಿ ಮೋಹದಂತೆ ಸದ್ದಿಲ್ಲದೆ ಹರಡುತ್ತಿದೆ. ಷೋಕಿಗಾಗಿ, ದೈಹಿಕ ಮತ್ತು ಮಾನಸಿಕ ನೋವಿನಿಂದ ಕೆಲ ಕ್ಷಣ ದೂರವಾಗಲು ಇದರ ಬಳಕೆಯಾಗುತ್ತಿದೆ. ಇದಕ್ಕೆ ದಾಸರಾಗುವವರಲ್ಲಿ ಹೆಚ್ಚಿನವರು 18 ರಿಂದ 30 ವರ್ಷದೊಳಗಿನವರು. ಜಗತ್ತಿನೆಲ್ಲೆಡೆ ಸುಮಾರು 500 ಬಿಲಿಯನ್ ಮೊತ್ತದ ಮಾದಕ ವಸ್ತುಗಳ ವಹಿವಾಟು ನಡೆಯುತ್ತದೆ. ಪೆಟ್ರೋಲಿಯಂ ಮತ್ತು ಶಸ್ತ್ರಾಸ್ತ್ರ ಉದ್ದಿಮೆಯ ನಂತರದ ಸ್ಥಾನ ದಕ್ಕಿದೆ! ಪ್ರತಿಷ್ಠೆ ಎಂದುಕೊಂಡಿರುವ ಯುವ ಜನಾಂಗದ ಮೊಂಡುತನ, ಸಾವಿನ ಬಾಗಿಲು ತಟ್ಟುವಂತೆಯೂ ಮಾಡಿದೆ. ದೇಶದಲ್ಲಿ ಸುಮಾರು ಒಂದು ಕೋಟಿ ಹೆರಾಯಿನ್ ವ್ಯಸನಿಗಳಿದ್ದಾರೆ. ಕೆಲ ತಿಂಗಳ ಹಿಂದೆ, ಮಂಗಳೂರಿನ ವಿದ್ಯಾರ್ಥಿನಿಯೋರ್ವಳು ಈ ದುಷ್ಚಟಕ್ಕೆ ಬಲಿಯಾದ ಘಟನೆ ನಮ್ಮ ಮುಂದಿದೆ. ನೆರೆಯ ಪಾಕಿಸ್ತಾನದಿಂದ ಇದರ ವ್ಯವಸ್ಥಿತ ಸರಬರಾಜು ನಡೆಯುತ್ತಿದೆ ಎಂಬ ಗುಮಾನಿಯೂ ಇದೆ. ಅದರಲ್ಲೂ ಕರಾವಳಿ ಪ್ರದೇಶ ವಾಮಮಾರ್ಗ ಕರುಣಿಸಿ ಡ್ರಗ್ ಮಾಫಿಯಾಕ್ಕೆ ತೆರೆದುಕೊಂಡಿದೆ. ಹಾಗಿದ್ದರೆ, ಡ್ರಗ್ಸ್ ಅಥವಾ ಮಾದಕ ವಸ್ತುಗಳ ಕುರಿತಾದ ಪಕ್ಷಿ ನೋಟ ಇಲ್ಲಿದೆ. ಮಾನಸಿಕ ಮತ್ತು ದೈಹಿಕ ಬದಲಾವಣೆಗೆ ಕಾರಣವಾಗುವ ವಸ್ತುಗಳಿಗೆ ಮಾದಕ ವಸ್ತು ಎನ್ನಲಾಗುತ್ತದೆ. ಇದು ಘನ, ದ್ರವ ಅಥವಾ ಅನಿಲ ರೂಪದಲ್ಲಿರುತ್ತದೆ. ವ್ಯಕ್ತಿಯ ನರಮಂಡಲದ ಮೇಲೆ ಪ್ರಭಾವ ಬೀರುವ ಮೂರು ಮುಖ್ಯ ಮಾದಕ ವಸ್ತುಗಳ ವಿಧಗಳು: ಡಿಪ

ಒಂದು ಸಾಲಿನ ಕತೆ

ಒಂದೇ ಸಾಲಿನಲ್ಲಿ ಉತ್ತರಿಸಲಾಗದು ಬದುಕೆಂಬ ಕ್ಲಿಷ್ಟ ಪ್ರಶ್ನೆ ಪತ್ರಿಕೆಗೆ. ಆಕಾಶಕ್ಕೆ ಏಣಿ ಇಟ್ಟಂತೆ, ಜೀವಮಾನವೇ ಜಾರಿ ಹೋಗುತ್ತದೆ. ದಿನ, ವಾರ, ತಿಂಗಳು ಕೊನೆಗೆ ಸಾಲು ಸಾಲಾಗಿ. ಪರಿವೆಯೇ ಇಲ್ಲದೆ ಕಳೆದುಹೋಗುತ್ತವೆ, ರಾತ್ರಿ ಬೆಳಗಾದಂತೆ ಸಾಲುಗಳು! ಈ ಸಾಲಿನಲ್ಲಿ ಆಗದ್ದು, ಮುಂದಿನ ಸಾಲಿನಲ್ಲಿ ಮಾಡುವ ಇರಾದೆ, ಪ್ರೌಢಿಮೆಯ ಭ್ರಮೆ ಮೈಮನವಿಡೀ ಹಬ್ಬುತ್ತದೆ, ಕಾಲಾಂತರ ಕಡೆಗಣಿಸಿ. ದಿನ ಎಣಿಸಿ, ಗುಣಿಸಿ, ಭಾಗಿಸುವಷ್ಟರಲ್ಲಿ ಆ ಸಾಲೂ ತುಳಿದಿರುತ್ತದೆ ನಿರ್ಗಮನದ ಹಾದಿ. ಮನಸ್ಸು ಮರುಗುತ್ತದೆ ಸಾಲು ಸಾಲುವುದಿಲ್ಲವೆಂದು. ಖಾಲಿ ಕೈಯಲ್ಲಿ ಬಂದು ಹೋಗುವ ನಮಗೂ, ಸಾಲುಗಳಿಗೂ ವ್ಯತ್ಯಾಸವಿಲ್ಲ. ಇಪ್ಪತ್ತೈದರ ಗುಣಾಕಾರದ ಹಬ್ಬಗಳಿಗೆ ಯಾವ ಸಾಲಿನ ಹಂಗಿಹುದೋ ಜಾಸ್ತಿ ? ಸಾಧನೆ, ಪ್ರತಿಷ್ಠೆಯ ಬೆಂಬತ್ತುವ ನಾವು ಸಾಲುಗಳ ಸಾಲಗಾರರಲ್ಲವೆ ? ನೋಡು-ನೋಡುತ್ತಿದ್ದಂತೆ ಮತ್ತೆ ಬಂದೆರಗುತ್ತದೆ, ಯಾವ ಭಕ್ಷೀಸನ್ನೂ ಬೇಡದೆ ಹೊಸ ಸಾಲು, ಹೊಸ ಸವಾಲು, ಹೊಸ ಅಹವಾಲು..!! (ಕೃಪೆ : ಕನ್ನಡ ಪ್ರಭ ) Deevatige by Sandeep Phadke is licensed under a Creative Commons Attribution-NonCommercial 4.0 International License . Based on a work at http://www.deevatige.blogspot.in/ .