Skip to main content

ಕಳೆಗುಂದುತ್ತಿದೆ ಶಿಕ್ಷಣ ವ್ಯವಸ್ಥೆ




ಇಂದು ಶಿಕ್ಷಣ ಕೇವಲ ಜ್ಞಾನದ ದಾಹ ತೀರಿಸಲಷ್ಟೇ ಸೀಮಿತವಾಗಿಲ್ಲ. ಬದಲಾಗಿ ಜೀವನ ನಿರೂಪಿಸುವಲ್ಲಿಯೂ ಪ್ರಮುಖ ಪಾತ್ರವಹಿಸುತ್ತಿದೆ. ದಿನೇ-ದಿನೇ ಎದುರಾಗುವ ಸವಾಲುಗಳನ್ನು ಸ್ವೀಕರಿಸಲು ವಿದ್ಯಾರ್ಥಿಗಳನ್ನು ಅಣಿಮಾಡುವ ವಿದ್ಯಾ ಸಂಸ್ಥೆಗಳು ನಮ್ಮಲ್ಲಿವೆ. ಸ್ಪರ್ಧಾ ಮನೋಭಾವವೊಂದಿದ್ದರೆ ಸಾಧನೆಗೆ ಅಡ್ಡಿಯಿಲ್ಲ. ಔದ್ಯೋಗಿಕ ಶಿಕ್ಷಣ ರಂಗ ಈ ನಿಟ್ಟಿನಲ್ಲಿ ಪ್ರಾಬಲ್ಯ ಮೆರೆದಿದೆ. ಐಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಮ್ಮ ದೇಶ, ರಾಜ್ಯದ ವಿದ್ಯಾರ್ಥಿಗಳಲ್ಲಿ ಇತ್ತ ಕಡೆ ಒಲವು ಮೂಡುವುದು ಸಹಜ. ಪದವಿ ಪೂರ್ವ ಅಥವಾ 12 ನೇ ತರಗತಿ ಮುಗಿಯುವುದನ್ನೇ ಕಾತರಿಸುತ್ತಾರೆ. ಪ್ರವೇಶ ಪರೀಕ್ಷೆಯೆಂಬ ಹುಚ್ಚು ಕುದುರೆಯನ್ನು ತಹಬಂದಿಗೆ ತರಲು ಕಸರತ್ತು ನಡೆಸುತ್ತಾರೆ. ನಾಯಿ ಕೊಡೆಗಳಂತೆ ಬೆಳೆಯುತ್ತಿರುವ ಇಂಜಿನೀರಿಂಗ್ ಕಾಲೇಜುಗಳ ಸಂಖ್ಯೆ, ಪ್ರಪ್ರತ್ಯೇಕ ಪ್ರವೇಶ ಪರೀಕ್ಷೆಗಳ ಗೋಜು ದಿಕ್ಕಾಪಾಲಾಗುವಂತೆ ಮಾಡುತ್ತಿವೆ. ಸೀಟು ಹಂಚಿಕೆಯ ವಿಷಯದಲ್ಲೂ ಖಾಸಗಿ ಕಾಲೇಜುಗಳದೇ ಸಿಂಹಪಾಲಾಗಿರುವುದರಿಂದ ಭಾರೀ ಶುಲ್ಕ ಕಟ್ಟುವಲ್ಲಿ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ನಡುವೆ ಇಂಜಿನೀರಿಂಗ್ ನಂತಹ ವೃತ್ತಿಪರ ಪದವಿಗಳಿಸುವಾಸೆ ವಿವೇಚನೆಯಿಂದ ದೂರಕ್ಕೆ ಹೋದರೆ ಆಶ್ಚರ್ಯವಿಲ್ಲ. ಆದರೆ ಗಮನಿಸಲೇಬೇಕಾದ ಅಂಶವೆಂದರೆ, ಅನೇಕ ಕಾಲೇಜುಗಳು ಗುಣಮಟ್ಟ ಕಾಪಾಡುವಲ್ಲಿ ವಿಫಲವಾಗಿವೆ. ಇದರಿಂದ ಕಲಿಕಾ ಮಟ್ಟವೂ ಕುಂಠಿತಗೊಳ್ಳುತ್ತಿದೆ. ಇಂತಹ ಆಪಾದನೆ, ದೇಶದ ಪ್ರತಿಷ್ಠಿತ ಐಐಟಿಗಳ ಮೇಲೂ ಇತ್ತೀಚೆಗೆ ಬರತೊಡಗಿದೆ. ಅದೇನೇ ಇರಲಿ, ಕಲಿಯುವ ಮನಸ್ಸೊಂದಿದ್ದರೆ ಯಾವುದೂ ಕಷ್ಟವಲ್ಲ.
ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಮುಂದಿಟ್ಟಿರುವ ಐಐಟಿ ಕೌಂನ್ಸಿಲ್ ನ ಪ್ರಸ್ತಾವನೆ ಚರ್ಚೆಗೆ ಗ್ರಾಸವಾಗಿದೆ. ‘ಒಂದು ದೇಶ, ಒಂದು ಪರೀಕ್ಷೆ’ ಎನ್ನುವ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ಉಂಟಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪ್ರತಿಷ್ಠಿತ ಐಐಟಿ, ಎನ್ಐಐಟಿ, ಐಐಐಟಿ ಮತ್ತು ಕೇಂದ್ರದ ಸ್ವಾಮ್ಯದಲ್ಲಿರುವ ವಿದ್ಯಾ ಸಂಸ್ಥೆಗಳಿಗೆ ರಾಷ್ಟ್ರ ವ್ಯಾಪಿ ಜೆಇಇ ಮಾದರಿಯ ಒಂದೇ ಪರೀಕ್ಷೆ ನಿಯೋಜಿಸುವ ಯೋಜನೆ ಇದು. ಸುಮಾರು ಎರಡೂವರೆ ವರ್ಷಗಳ ಅಧ್ಯಯನ ಈ ಯೋಜಿತ ಉದ್ದೇಶದ ಹಿಂದಿದೆ. ಸಮಾಜದ ಒಂದು ವರ್ಗಕ್ಕಷ್ಟೇ ನಿಲುಕುವಂತಿರುವ ಈಗಿನ ಪ್ರವೇಶ ಪರೀಕ್ಷೆ ನಮೂನೆ ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ದಕ್ಕುವಂತಿಲ್ಲ. ಕಾರಣ, ಈ ಪರೀಕ್ಷೆಗೂ, ಶಾಲಾ ಪಠ್ಯಕ್ರಮಕ್ಕೂ ಹೆಚ್ಚಿನ ಸಂಬಂಧವಿಲ್ಲ. ಹಾಗಾಗಿ, ಅದಕ್ಕೊಂದು ವಿಶೇಷ ತರಬೇತಿಯ ಅಗತ್ಯವಿದೆ.  ಐಐಟಿ ಬಾಂಬೆ 2006ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ದಾಖಲಾತಿಯಾದ 476 ವಿದ್ಯಾರ್ಥಿಗಳ ಪೈಕಿ 300 ಮಂದಿ ಕೋಚಿಂಗ್ ಸೆಂಟರ್ ಗಳ ಮೂಲಕ ಬಂದಿರುವುದು ಅರಿವಿಗೆ ಬಂದಿದೆ. ಇಂತಹ ಕೆಲ ನ್ಯೂನತೆಗಳನ್ನು ಸರಿದೂಗಿಸಲು ಉದ್ದೇಶಿತ ಪರೀಕ್ಷೆಯು 40:30:30 ಅನುಪಾತದಲ್ಲಿದ್ದು, ಶೇ.40 ಆದ್ಯತೆಯನ್ನು 12ನೇ ತರಗತಿಗೆ ಮತ್ತು ಕ್ರಮವಾಗಿ ಶೇ.30 ಮುಖ್ಯ ಪರೀಕ್ಷೆಗಳಿಗೆ ನೀಡಲಾಗಿದೆ. 12ನೇ ತರಗತಿಯ ಅಂಕಗಳನ್ನು ಪರಿಗಣಿಸುವುದರಿಂದ ಶಾಲಾ ಶಿಕ್ಷಣದ ಭದ್ರ ಬುನಾದಿ ವಿದ್ಯಾರ್ಥಿಗಳಿಗಿರುತ್ತದೆ ಮತ್ತು ಎಲೆ ಮರೆಯ ಕಾಯಿಯಂತಹ  ಪ್ರತಿಭೆಗಳಿಗೆ ಅನುವಾಗಬಹುದೆಂಬ ಆಶಯ ಸ್ವಾಗತಾರ್ಹ. ಅಂತೆಯೇ, ಗಗನ ಕುಸುಮವೆಂದು ನಂಬಿದ್ದ ಐಐಟಿ ಶಿಕ್ಷಣ ಎಲ್ಲರಿಗೂ ತಲುಪಿಸುವ ಪ್ರಯತ್ನದಿಂದ ಕೆಲವರಿಗಾದರೂ ಸದಾವಕಾಶ ದೊರಕಬಹುದು.

ಒಳ್ಳೆಯ ಮುಂದಾಲೋಚನೆಯಾದರೂ, ಕಾರ್ಯರೂಪಕ್ಕೆ ತರುವಲ್ಲಿ ಅನೇಕ ಅಡ್ಡಿ-ಆತಂಕಗಳನ್ನು ಎದುರಿಸುವ ಸಾಧ್ಯತೆಯಿದೆ. ಸುಮಾರು 5000 ಸೀಟುಗಳಿಗಾಗಿ ನಡೆಯುವ ಪರೀಕ್ಷೆಯನ್ನು ಸುಮಾರು 15 ಲಕ್ಷ ಆಕಾಂಕ್ಷಿಗಳು ಎದುರಿಸಬೇಕಾಗುತ್ತದೆ.ಒಟ್ಟು ಮೂರು ಹಂತಗಳಲ್ಲಾಗುವುದರಿಂದ, ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ, ಗೊಂದಲ ಮೂಡುವ ಸಾಧ್ಯತೆ ಹೆಚ್ಚಿದೆ. ರಾಜ್ಯವಾರು ಪಠ್ಯಕ್ರಮಗಳಲ್ಲಿರುವ ವ್ಯತ್ಯಾಸದಿಂದಾಗಿ 12ನೇ ತರಗತಿ ಅಂಕಗಳನ್ನು ಪರಿಗಣಿಸುವ ಸಂಬಂಧ ಐಐಟಿಗಳು ತಕರಾರು ತೆಗೆದಿವೆ. ಇನ್ನು, ಶಾಲೆಯಲ್ಲಿನ ಬೋಧನೆ ಪೂರಕವಾಗಿಲ್ಲ ಎಂದಾಗ ಸಹಾಯಕ್ಕೆ ಕೊಚಿಂಗ್ ಸೆಂಟರ್ ಗಳ ಮೊರೆ ಹೋಗುತ್ತಾರೆ. ಕೋಚಿಂಗ್ ಸೆಂಟರ್ ಗಳ ಹಾವಳಿಯನ್ನು ಹೊಸ ಪರೀಕ್ಷಾ ವಿಧಾನದ ಮೂಲಕ ತಡೆಗಟ್ಟಬಹುದೆಂಬುದು ದೂರದ ಮಾತು. ಜೆಇಇಯಂತಹ ಪರೀಕ್ಷೆಗಳಿಗೆ ಸಿದ್ಧರಾಗಲು, ಪಠ್ಯಕ್ರಮದಲ್ಲೂ ಬದಲಾವಣೆ ತರುವುದು ಅನಿವಾರ್ಯ. ಆದರೆ, ಈ ಕೆಲಸ ಹಂತ ಹಂತವಾಗಿ ನಡೆಯಬೇಕು. ಏಕಾಏಕಿ ಬದಲಾವಣೆ ಒಡ್ಡುವುದು ವಿದ್ಯಾರ್ಥಿಗಳು, ಹೆತ್ತವರು ಮತ್ತು ಬೋಧಕ ವರ್ಗವನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ನಮ್ಮ ರಾಜ್ಯದಲ್ಲಿ ಈ ಬಾರಿ ಪ್ರಥಮ ಪಿಯುಸಿಗೆ ಸಿಬಿಎಸ್ಸಿ ಪಠ್ಯಕ್ರಮ ಜಾರಿಗೊಳಿಸಿದ ಹಿನ್ನೆಲೆ ಅನೇಕ ಪರ-ವಿರೋಧಗಳು ವ್ಯಕ್ತವಾಗಿವೆ.
ಬಹುಶಃ ಇಂತಹ ಮಾರ್ಪಾಡುಗಳು ಪ್ರಾಥಮಿಕ ಹಂತದಲ್ಲೇ ನಡೆದರೆ, ವಿದ್ಯಾರ್ಥಿಗಳು ಪ್ರಯೋಗ ಪಶುಗಳಾಗುವುದನ್ನು ತಪ್ಪಿಸಬಹುದು. ಶಿಕ್ಷಣ ಶಿಕ್ಷೆಯೆಂದನಿಸದು. ಮಾರಾಟದ ಸರಕಿನಂತಾಗಿರುವ ಶಿಕ್ಷಣದ ಘನತೆಯನ್ನು ಕಾಪಾಡುವುದು ಬಹು ಮುಖ್ಯವಾಗಿದೆ.  ಅಪವಾದವೆಂಬಂತೆ, ನಾವಿನ್ನೂ ಯಾವ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕೆಂಬ ಇತ್ತಂಡ ವಾದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲ ಯತ್ನ ನಡೆಸುತ್ತಿದ್ದೇವೆ. ಹಣ ಮತ್ತು ಜಾತಿಯ ಸಂಕೋಲೆಯಿಂದ ಶಿಕ್ಷಣವನ್ನು ಕಟ್ಟಿ ಹಾಕುತ್ತಿರುವುದು ದುರ್ದೈವವೇ ಸರಿ. ಸರ್ಕಾರಿ ಶಾಲೆಗಳು ಮುಚ್ಚಲು ಕಳಪೆ ಗುಣಮಟ್ಟ, ಭಾಷಾ ಮಾಧ್ಯಮದ ತೊಡಕು ಅಥವಾ ಜನ ಸಾಮಾನ್ಯರ ವಿಚಾರ ಲಹರಿ ಬದಲಾಗಿರುವುದು ಕಾರಣವಾಗಿರಬಹುದು. ಇವೆಲ್ಲವನ್ನು ಪರಿಶೀಲಿಸದೆ ಹೋದರೆ, ಬಡತನ ರೇಖೆಗಿಂತ ಕೆಳಗಿರುವವರು ಶಿಕ್ಷಣದಿಂದ ವಂಚಿತರಾಗಬಹುದು. ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ಜಾಯಮಾನ ಬಿಟ್ಟು ಎಲ್ಲಾ ಆಯಾಮಗಳಿಂದಲೂ ಶಿಕ್ಷಣದ ಉನ್ನತಿಗೆ  ಪಣತೊಡಬೇಕಿದೆ. 
ಕೃಪೆ: www.ekanasu.com

Creative Commons License

Comments

Popular posts from this blog

ಯುವ ಜನತೆ ಮತ್ತು ಸಾಮಾಜಿಕ ತಾಣಗಳು

        ಸಂ ಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.        ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.ಇದರಲ್ಲಿ ಒಂದಷ್ಟು ಸತ್ಯವಿದೆ.ದಿನದ ಸುಮಾರು

ಮಾದಕ ಅಧ್ವಾನ

ಧೂ ಮಪಾನ, ಮದ್ಯಪಾನದಂತೆ ಮಾದಕ ದ್ರವ್ಯ ಸೇವನೆಯ ಚಟ ಹೊಸ ತಲೆಮಾರಿನ ಯುವಕ/ಯುವತಿಯರಲ್ಲಿ ವಿದೇಶಿ ಮೋಹದಂತೆ ಸದ್ದಿಲ್ಲದೆ ಹರಡುತ್ತಿದೆ. ಷೋಕಿಗಾಗಿ, ದೈಹಿಕ ಮತ್ತು ಮಾನಸಿಕ ನೋವಿನಿಂದ ಕೆಲ ಕ್ಷಣ ದೂರವಾಗಲು ಇದರ ಬಳಕೆಯಾಗುತ್ತಿದೆ. ಇದಕ್ಕೆ ದಾಸರಾಗುವವರಲ್ಲಿ ಹೆಚ್ಚಿನವರು 18 ರಿಂದ 30 ವರ್ಷದೊಳಗಿನವರು. ಜಗತ್ತಿನೆಲ್ಲೆಡೆ ಸುಮಾರು 500 ಬಿಲಿಯನ್ ಮೊತ್ತದ ಮಾದಕ ವಸ್ತುಗಳ ವಹಿವಾಟು ನಡೆಯುತ್ತದೆ. ಪೆಟ್ರೋಲಿಯಂ ಮತ್ತು ಶಸ್ತ್ರಾಸ್ತ್ರ ಉದ್ದಿಮೆಯ ನಂತರದ ಸ್ಥಾನ ದಕ್ಕಿದೆ! ಪ್ರತಿಷ್ಠೆ ಎಂದುಕೊಂಡಿರುವ ಯುವ ಜನಾಂಗದ ಮೊಂಡುತನ, ಸಾವಿನ ಬಾಗಿಲು ತಟ್ಟುವಂತೆಯೂ ಮಾಡಿದೆ. ದೇಶದಲ್ಲಿ ಸುಮಾರು ಒಂದು ಕೋಟಿ ಹೆರಾಯಿನ್ ವ್ಯಸನಿಗಳಿದ್ದಾರೆ. ಕೆಲ ತಿಂಗಳ ಹಿಂದೆ, ಮಂಗಳೂರಿನ ವಿದ್ಯಾರ್ಥಿನಿಯೋರ್ವಳು ಈ ದುಷ್ಚಟಕ್ಕೆ ಬಲಿಯಾದ ಘಟನೆ ನಮ್ಮ ಮುಂದಿದೆ. ನೆರೆಯ ಪಾಕಿಸ್ತಾನದಿಂದ ಇದರ ವ್ಯವಸ್ಥಿತ ಸರಬರಾಜು ನಡೆಯುತ್ತಿದೆ ಎಂಬ ಗುಮಾನಿಯೂ ಇದೆ. ಅದರಲ್ಲೂ ಕರಾವಳಿ ಪ್ರದೇಶ ವಾಮಮಾರ್ಗ ಕರುಣಿಸಿ ಡ್ರಗ್ ಮಾಫಿಯಾಕ್ಕೆ ತೆರೆದುಕೊಂಡಿದೆ. ಹಾಗಿದ್ದರೆ, ಡ್ರಗ್ಸ್ ಅಥವಾ ಮಾದಕ ವಸ್ತುಗಳ ಕುರಿತಾದ ಪಕ್ಷಿ ನೋಟ ಇಲ್ಲಿದೆ. ಮಾನಸಿಕ ಮತ್ತು ದೈಹಿಕ ಬದಲಾವಣೆಗೆ ಕಾರಣವಾಗುವ ವಸ್ತುಗಳಿಗೆ ಮಾದಕ ವಸ್ತು ಎನ್ನಲಾಗುತ್ತದೆ. ಇದು ಘನ, ದ್ರವ ಅಥವಾ ಅನಿಲ ರೂಪದಲ್ಲಿರುತ್ತದೆ. ವ್ಯಕ್ತಿಯ ನರಮಂಡಲದ ಮೇಲೆ ಪ್ರಭಾವ ಬೀರುವ ಮೂರು ಮುಖ್ಯ ಮಾದಕ ವಸ್ತುಗಳ ವಿಧಗಳು: ಡಿಪ

ಒಂದು ಸಾಲಿನ ಕತೆ

ಒಂದೇ ಸಾಲಿನಲ್ಲಿ ಉತ್ತರಿಸಲಾಗದು ಬದುಕೆಂಬ ಕ್ಲಿಷ್ಟ ಪ್ರಶ್ನೆ ಪತ್ರಿಕೆಗೆ. ಆಕಾಶಕ್ಕೆ ಏಣಿ ಇಟ್ಟಂತೆ, ಜೀವಮಾನವೇ ಜಾರಿ ಹೋಗುತ್ತದೆ. ದಿನ, ವಾರ, ತಿಂಗಳು ಕೊನೆಗೆ ಸಾಲು ಸಾಲಾಗಿ. ಪರಿವೆಯೇ ಇಲ್ಲದೆ ಕಳೆದುಹೋಗುತ್ತವೆ, ರಾತ್ರಿ ಬೆಳಗಾದಂತೆ ಸಾಲುಗಳು! ಈ ಸಾಲಿನಲ್ಲಿ ಆಗದ್ದು, ಮುಂದಿನ ಸಾಲಿನಲ್ಲಿ ಮಾಡುವ ಇರಾದೆ, ಪ್ರೌಢಿಮೆಯ ಭ್ರಮೆ ಮೈಮನವಿಡೀ ಹಬ್ಬುತ್ತದೆ, ಕಾಲಾಂತರ ಕಡೆಗಣಿಸಿ. ದಿನ ಎಣಿಸಿ, ಗುಣಿಸಿ, ಭಾಗಿಸುವಷ್ಟರಲ್ಲಿ ಆ ಸಾಲೂ ತುಳಿದಿರುತ್ತದೆ ನಿರ್ಗಮನದ ಹಾದಿ. ಮನಸ್ಸು ಮರುಗುತ್ತದೆ ಸಾಲು ಸಾಲುವುದಿಲ್ಲವೆಂದು. ಖಾಲಿ ಕೈಯಲ್ಲಿ ಬಂದು ಹೋಗುವ ನಮಗೂ, ಸಾಲುಗಳಿಗೂ ವ್ಯತ್ಯಾಸವಿಲ್ಲ. ಇಪ್ಪತ್ತೈದರ ಗುಣಾಕಾರದ ಹಬ್ಬಗಳಿಗೆ ಯಾವ ಸಾಲಿನ ಹಂಗಿಹುದೋ ಜಾಸ್ತಿ ? ಸಾಧನೆ, ಪ್ರತಿಷ್ಠೆಯ ಬೆಂಬತ್ತುವ ನಾವು ಸಾಲುಗಳ ಸಾಲಗಾರರಲ್ಲವೆ ? ನೋಡು-ನೋಡುತ್ತಿದ್ದಂತೆ ಮತ್ತೆ ಬಂದೆರಗುತ್ತದೆ, ಯಾವ ಭಕ್ಷೀಸನ್ನೂ ಬೇಡದೆ ಹೊಸ ಸಾಲು, ಹೊಸ ಸವಾಲು, ಹೊಸ ಅಹವಾಲು..!! (ಕೃಪೆ : ಕನ್ನಡ ಪ್ರಭ ) Deevatige by Sandeep Phadke is licensed under a Creative Commons Attribution-NonCommercial 4.0 International License . Based on a work at http://www.deevatige.blogspot.in/ .