(ಕವಿ
ಗೋಷ್ಠಿ- ಬೆಳ್ತಂಗಡಿ ತಾ|| 11ನೇ ಕನ್ನಡ ಸಾಹಿತ್ಯ ಸಮ್ಮೇಳನ, ಮುಂಡಾಜೆ :: 20-12-2011)
ದೂರವಾದಂತೆ ನೆನಪಾಗುತ್ತವೆ
ಹಳೆಯ, ಬಣ್ಣ ಮಾಸಿದ
ಗಟ್ಟಿ ಗೋಡೆಗಳು.
ಆದರೆ,
ನೆಲೆಗಾಣುವ ನಿರೀಕ್ಷೆಯಲಿ
ತೆರೆದುಕೊಳ್ಳುವ ಹೆಬ್ಬಾಗಿಲಿಗೆ,
ಗೋಡೆಗಳೆಂಬುದು ಮರೀಚಿಕೆ.
ಅನುಕಂಪ, ಮಾನ-ಮರ್ಯಾದೆ
ಬೊಗಸೆಯಲಿ ಬಚ್ಚಿಡುವ
ಇನ್ನಿಲ್ಲದ ಧಾವಂತ.
ದುರುಪಯೋಗವಾಗಬಹುದು
ನಡು ರಾತ್ರಿ-ಹಗಲೆನ್ನದೆ,
ಕಾಮಲೆ ಕಣ್ಣೆಗೆ,
ಗೋಡೆಗಳಿಲ್ಲ ರಕ್ಷಣೆಗೆ.
ಇಲ್ಲಿ ಗೋಡೆಗಳಿಲ್ಲ...
ನೋಡುವವರು ಅದೆಷ್ಟೋ ಜನ
ನಮ್ಮ ಆಟ, ಭಯ, ಆತಂಕ,
ಅವಮಾನದ ವರಸೆ.
ಬಯಸಿ ಬಂದವರಂತೆ
ನಾವೂ ನಡೆಯುತ್ತೇವೆ
ಅನಿವಾರ್ಯದ ಅಂಕದಲಿ.
ನೂರು ಆಸೆಗಳನು ಹೊತ್ತು,
ಟೊಂಕ ಕಟ್ಟಿ ನಿಂತವರು,
ಬಳಲಿ-ಬೆಂಡಾಗುವವರೆಗೆ,
ದಿಶೆ ತಪ್ಪುವವರೆಗೆ,
ಅನಿರ್ದಿಷ್ಟ ಕಾಲದ
ತೀರದ ಪಯಣ.
ಗೋಡೆಗಳಿಲ್ಲ ಅಡೆ-ತಡೆಗೆ.
ಕಣ್ಣಾ-ಮುಚ್ಚಾಲೆ ಆಟದಂತೆ
ಭ್ರಷ್ಟ ಆಚಾರಗಳನ್ನು
ಕದ್ದು-ಮುಚ್ಚಿ ಪರಿಪಾಲಿಸಿದರೂ,
ಕೈಗೆ ಬೇಡಿ ನಿಶ್ಚಿತ.
ನೋಡುತ್ತಿರುತ್ತಾರೆ ಸಹಸ್ರಾರು
ಕಂದೀಲು ಹಿಡಿದು ಜನ.
ಗೋಡೆಗಳೆಂಬುದು ನಿಮಿತ್ತ.
ಅನುಭೋಗದ ಬದುಕು
ಬೀದಿಗೆ ಬಂದಿದೆ.
ಜೀವನ ಮೌಲ್ಯ
ಅರಿಯದ ಜೀವಗಳು
ಹೊಡೆದಾಡುತ್ತಿವೆ.
ಇರಬೇಕಾದಲ್ಲಿ ಇಲ್ಲ
ನಾಲ್ಕು ಗೋಡೆಗಳು.
(ಕೃಪೆ: ಚಾರುಮುಡಿ-2011)
Comments