Skip to main content

ಸಮಾಜಕ್ಕೆ ಒಗ್ಗದ ತಾಣಗಳೇ..?


ಮಾಜದ ಹಿತದೃಷ್ಟಿಯಿಂದ ಜನಾಭಿಪ್ರಾಯ ಸಂಗ್ರಹಿಸುವುದು ಸಾಮಾನ್ಯ. ಪರ-ವಿರೋಧಗಳ ತುಲನೆ ಮಾಡಿ ಅಂತಿಮ ನಿರ್ಣಾಯ ಕೈಗೊಳ್ಳಲಾಗುತ್ತದೆ. ಇತ್ತೀಚೆಗೆ ಸಾಮಾಜಿಕ ತಾಣಗಳು ಅತಿರೇಕದ ಜನಾಭಿಪ್ರಾಯ ಒಟ್ಟುಗೂಡಿಸಲು ಮಾಧ್ಯಮಗಳಾಗುತ್ತಿವೆ. ವೈಯುಕ್ತಿಕ ದಿನಚರಿಯನ್ನೇ ‘ಗೋಡೆ’ ಬರಹವಾಗಿಸಿ ಸ್ನೇಹಿತರ ಪ್ರತಿಕ್ರಿಯೆಗೆ ದಿನವಿಡೀ ಹಪ-ಹಪಿಸುವವರಿದ್ದಾರೆ. ಕೆಲವು ಜಾತಿ-ಧರ್ಮ-ವ್ಯಕ್ತಿಗಳನ್ನು ಹಂಗಿಸುವ, ಛೇಡಿಸುವ ‘ಬೇನಾಮಿ’ಗಳ ಚಟುವಟಿಕೆ ಅಂಕೆಯಿಲ್ಲದ್ದಾಗಿದೆ. ಅವಹೇಳನ, ಪ್ರಚೋದನಕಾರಿ ಪ್ರತಿಕ್ರಿಯೆಗಳು ಭಾವೈಕ್ಯತೆಯನ್ನು ನುಂಗಿಹಾಕುತ್ತಿವೆ. ಇದೆಲ್ಲದರ ಬಗ್ಗೆ ಪ್ರಶ್ನೆ ಮಾಡಲೇಬೇಕೆನ್ನಿಸುವುದು ಸಹಜ.ಕಾಂಗ್ರೆಸ್ ನಾಯಕಿ ಸೋನಿಯಾ ವಿರುದ್ಧ ಫೇಸ್ ಬುಕ್ ನಲ್ಲಿದ್ದ ಮಾಹಿತಿ ಕೇಂದ್ರ ಸಚಿವ ಕಪಿಲ್ ಸಿಬಲ್ ರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿತು. ವಿಪಕ್ಷಗಳಿಂದ ಲೇವಡಿಗೊಳಗಾದರು. ಅದೇನೇ ಇರಲಿ, ಒಂದು ವಿಷಯ ಚರ್ಚೆಯಾಗಬೇಕಾದರೆ ಕಾರಣಗಳು ಬೇಕು ಎಂದು ಮನವರಿಕೆ ಮಾಡಿಕೊಳ್ಳುವುದು ಉತ್ತಮ. ಬಹುಶಃ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಂಡಿರುವ ಸಾಮಾಜಿಕ ತಾಣಗಳು ನಿರಂಕುಶ ಪ್ರಭುತ್ವ ಹೊಂದಿವೆ ಎಂದರೆ ತಪ್ಪಾಗಲಾರದು. ಆದರೆ ಇದೀಗ ವಿವಿಧ ಜಾತಿ-ಧರ್ಮ-ಪಂಗಡಗಳು ಇಲ್ಲಿ ನಡೆಯುವ ಧರ್ಮ ವಿರೋಧಕ್ಕೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆಕ್ಷೇಪಾರ್ಹ, ನಿಂದನಾತ್ಮಕ ಅಂಶಗಳನ್ನು ತೆಗೆದು ಹಾಕಲು ಫೆಬ್ರವರಿ ಐದರ ಗಡುವು ನೀಡಿದೆ.

ಪಾಶ್ಚಾತ್ಯ ದೇಶಗಳಂತೆ, ನಮ್ಮಲ್ಲೂ ಅಭಿವ್ಯಕ್ತಿ ಅಸ್ತ್ರವಾಗಿ ರೂಪ ತಳೆದಿರುವುದು ಸ್ತುತ್ಯವೇ. ಬೇಕು-ಬೇಡಗಳ ಕುರಿತು ಅಭಿಪ್ರಾಯ ಹಂಚಿಕೊಳ್ಳಲು ಸುಲಭೋಪಾಯ.ಗೆಳೆಯರ ಬಳಗ ಕಟ್ಟಿಕೊಳ್ಳುವುದಲ್ಲದೇ, ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳನ್ನು ಚರ್ಚಿಸಲು, ಹೊಸ ಉತ್ಪನ್ನಗಳ ಜಾಹೀರಾತುಗಳಿಗೂ ಫೇಸ್ ಬುಕ್, ಟ್ವಿಟರ್, ಗೂಗಲ್+ ಮೊದಲಾದ ಸಾಮಾಜಿಕ ತಾಣಗಳನ್ನು ಬಳಸಲಾಗುತ್ತದೆ.ಹೀಗಿರುವಾಗ ಈ ತಾಣಗಳು ಕಳಂಕಿತವಾಗಲು ಸಾಧ್ಯವೇ? ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದ ಸಂದರ್ಭದಲ್ಲಿ ಸಾಮಾಜಿಕ ತಾಣಗಳನ್ನು ಮುಖ್ಯ ವಾಹಿನಿಯಂತೆ ಬಳಸಿಕೊಳ್ಳಲಾಗಿದೆ. ಲಕ್ಷಾಂತರ ಜನರ ‘ಬೆಂಬಲ’ ಅಖಾಡಕ್ಕಿಳಿಯುವ ಮಂದಿಗೆ ನೈತಿಕ ಸ್ಧೈರ್ಯ ತುಂಬಿದೆ ಎನ್ನಬಹುದು. ಒಟ್ಟಾರೆಯಾಗಿ ಹಾಸು-ಹೊಕ್ಕಾಗಿ ಹರಡಿರುವ ಈ ತಾಣಗಳ ಶಕ್ತಿ ಪ್ರದರ್ಶನವಾದಂತಿತ್ತು.

           ಆಹಾರ ಬೇರೆ, ವ್ಯವಹಾರ ಬೇರೆ. ಇಂತಹ ಸಾಮಾಜಿಕ ತಾಣಗಳು ಜನರ ಭಾವನೆಗಳನ್ನು ಸರಕಾಗಿಸಿ ವ್ಯವಹರಿಸುತ್ತಿವೆಯೇ ಹೊರತು ಮತ್ತೇನೂ ಅಲ್ಲ. ನಮ್ಮಲ್ಲಿ ನಿರ್ಣಯ ಕೈಗೊಳ್ಳುವ ಮತ್ತು ಜನಾಭಿಪ್ರಾಯ ಸಂಗ್ರಹಿಸುವಲ್ಲಿನ ಹುರುಪು ಕಾರ್ಯಗತಗೊಳಿಸುವಲ್ಲಿ ಇಲ್ಲ. ಹಾಗಾಗಿಯೇ ಈ ತಾಣಗಳನ್ನು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಕೇವಲ ಅವರಿವರು ಏನು ಹೇಳುತ್ತಾರೆಂದು ತಿಳಿಯುವುದರಿಂದ ಯಾವ ಪ್ರಯೋಜನವೂ ಇಲ್ಲ. ಫೇಸ್ ಬುಕ್, ಟ್ವಿಟರ್ ಗಳ ಚಟುವಟಿಕೆಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸದೇ ಇರುವುದು, ವಾದಕ್ಕೆ ಪ್ರತಿವಾದವೆಂಬ ಧೋರಣೆ ಮತ್ತು ತಮ್ಮನ್ನೇ ತಾವು promote ಮಾಡಿಕೊಳ್ಳುವ ಚಾಳಿ ಕೆಲ ಸಂದರ್ಭದಲ್ಲಿ ಮಿತಿಮೀರಿದಾಗ ಪ್ರತಿಕೂಲ ವಾತಾವರಣ ಏರ್ಪಡುವಂತೆ ಮಾಡುತ್ತದೆ.ಎಲ್ಲರಿಗೂ ಮುಕ್ತವಾಗಿರುವ ಈ ತಾಣಗಳಲ್ಲಿ ಸಂಕೀರ್ಣ ವಿಚಾರಗಳನ್ನು ಚರ್ಚಿಸುವಾಗ ಗಾಳಿಯಲ್ಲಿ ಗುಂಡು ಹಾರಿಸಿದಂತೆ ಅಭಿಪ್ರಾಯ ನೀಡುವುದರಲ್ಲಿ ಅರ್ಥವಿಲ್ಲ. ಅನ್ಯ ಮನಸ್ಕರಾಗಿ ಆಕ್ರೋಶಪಡುವುದು, ಸಾಂದರ್ಭಿಕ ನೆಲೆಯಲ್ಲಿ ಕೆಂಗಣ್ಣಿಗೆ ಗುರಿಯಾಗಬಹುದು. ಇಷ್ಟಕ್ಕೂ ಇಲ್ಲಿ ನಡೆಯುವ ಚರ್ಚೆಗಳ ವಿಷಯ ವ್ಯಾಪ್ತಿ ಕಿರಿದು.ತ್ವರಿತ ಸಂಪರ್ಕ, ವಿಚಾರ-ವಿಮರ್ಶೆ ಮತ್ತು ಅನಿಸಿಕೆಗಳಿಗೆ ವೇದಿಕೆಯಾಗಿರುವ ತಾಣಗಳಲ್ಲಿ ಪೂರ್ವಾಗ್ರಹ ಪೀಡಿತರಂತೆ ನಡೆದುಕೊಳ್ಳದೇ ಇದ್ದರೆ ಕಲಹಕ್ಕೆ ಆಸ್ಪದವೇ ಇರುವುದಿಲ್ಲ. ಅಭಿವ್ಯಕ್ತಿಯ ಹೆಸರಿನಲ್ಲಿ ಜನರಿಗೆ ಅವಕಾಶ ಕಲ್ಪಿಸಲಾಗಿದೆಯೇ ಹೊರತು, ಇದು ಊರಿನ ಪಂಚಾಯಿತಿ ಕಟ್ಟೆಯಾಗಲು ಅಥವಾ ದೇಶವನ್ನು ಪಲ್ಲಟಿಸುವ ಸೂತ್ರವಾಗಲು ಅಸಾಧ್ಯ.

          ಸಾಮಾಜಿಕ ತಾಣಗಳ ಕುರಿತು ಒಂದಷ್ಟು ಕುತೂಹಲವೂ, ವಿರೋಧವೂ ಇದೆ. ವ್ಯಕ್ತಿಯ ಚಾರಿತ್ರ್ಯ ತಿಳಿಯಲು ಇವುಗಳ ಬಳಕೆಯಾಗುತ್ತಿದೆ. ಗೌಪ್ಯತೆಯನ್ನು ಬದಿಗಿಟ್ಟು ನಡೆಯುವ ವ್ಯವಹಾರಗಳು ಕೆಲವರ ಪಾಲಿಗೆ ಮುಳುವಾಗಿದೆ. ಸಂಪ್ರದಾಯವಾದಿಗಳ ಪಾಲಿಗೆ ಅಸಹ್ಯವಾಗಿದೆ. Offlineನಲ್ಲಿದ್ದಾಗ ಕಾಡುವ ಒಂಟಿತನ ಮಿಥ್ಯ ಜೀವನದ (Virtual Life) ಕಡೆಗೆ ಕೊಂಡೊಯ್ಯತ್ತಿದೆ. ಇದರ ನಡುವೆ, ಫೇಸ್ ಬುಕ್ ‘Timeline’ ಎನ್ನುವ ಹೊಸ ಅವತಾರದೊಂದಿಗೆ ಜನ್ಮ ಜಾಲಾಡಲು ಅಣಿಯಾಗಿದೆ. ಆದರೆ ಇದೆಲ್ಲವನ್ನು ವಿರೋಧಿಸುವ ಮೊದಲು, ಈ ತಾಣಗಳು ಮಾಹಿತಿ ಕಣಜವಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಅಷ್ಟೇ ಅಲ್ಲದೆ, ಎಲ್ಲದಕ್ಕೂ ವಿನಾಯಿತಿ ನೀಡುವ ಅಂತರ್ಜಾಲವೆಂಬ ಸೂಕ್ಷ್ಮ ವ್ಯವಸ್ಥೆಯೇ ಕಗ್ಗಂಟಾಗಿರುವಾಗ ಸಾಮಾಜಿಕ ತಾಣಗಳ ಬಗೆಗೆ ವೃಥಾ ಹಳಿಯಬೇಕಷ್ಟೆ. ಲಂಗು-ಲಗಾಮಿಲ್ಲದಿರುವುದರಿಂದ ವೈಮನಸ್ಸುಗಳು ಉಂಟಾದರೂ ಮತ್ತೆ ಮತ್ತೆ ಬೊಟ್ಟು ಮಾಡಿ ತೋರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ..!
                                               
                                                                  (ಕೃಪೆ:ವಿಜಯ ಕರ್ನಾಟಕ-29-12-2011)
Creative Commons License

Comments

Popular posts from this blog

ಯುವ ಜನತೆ ಮತ್ತು ಸಾಮಾಜಿಕ ತಾಣಗಳು

        ಸಂ ಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.        ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.ಇದರಲ್ಲಿ ಒಂದಷ್ಟು ಸತ್ಯವಿದೆ.ದಿನದ ಸುಮಾರು

ಮಾದಕ ಅಧ್ವಾನ

ಧೂ ಮಪಾನ, ಮದ್ಯಪಾನದಂತೆ ಮಾದಕ ದ್ರವ್ಯ ಸೇವನೆಯ ಚಟ ಹೊಸ ತಲೆಮಾರಿನ ಯುವಕ/ಯುವತಿಯರಲ್ಲಿ ವಿದೇಶಿ ಮೋಹದಂತೆ ಸದ್ದಿಲ್ಲದೆ ಹರಡುತ್ತಿದೆ. ಷೋಕಿಗಾಗಿ, ದೈಹಿಕ ಮತ್ತು ಮಾನಸಿಕ ನೋವಿನಿಂದ ಕೆಲ ಕ್ಷಣ ದೂರವಾಗಲು ಇದರ ಬಳಕೆಯಾಗುತ್ತಿದೆ. ಇದಕ್ಕೆ ದಾಸರಾಗುವವರಲ್ಲಿ ಹೆಚ್ಚಿನವರು 18 ರಿಂದ 30 ವರ್ಷದೊಳಗಿನವರು. ಜಗತ್ತಿನೆಲ್ಲೆಡೆ ಸುಮಾರು 500 ಬಿಲಿಯನ್ ಮೊತ್ತದ ಮಾದಕ ವಸ್ತುಗಳ ವಹಿವಾಟು ನಡೆಯುತ್ತದೆ. ಪೆಟ್ರೋಲಿಯಂ ಮತ್ತು ಶಸ್ತ್ರಾಸ್ತ್ರ ಉದ್ದಿಮೆಯ ನಂತರದ ಸ್ಥಾನ ದಕ್ಕಿದೆ! ಪ್ರತಿಷ್ಠೆ ಎಂದುಕೊಂಡಿರುವ ಯುವ ಜನಾಂಗದ ಮೊಂಡುತನ, ಸಾವಿನ ಬಾಗಿಲು ತಟ್ಟುವಂತೆಯೂ ಮಾಡಿದೆ. ದೇಶದಲ್ಲಿ ಸುಮಾರು ಒಂದು ಕೋಟಿ ಹೆರಾಯಿನ್ ವ್ಯಸನಿಗಳಿದ್ದಾರೆ. ಕೆಲ ತಿಂಗಳ ಹಿಂದೆ, ಮಂಗಳೂರಿನ ವಿದ್ಯಾರ್ಥಿನಿಯೋರ್ವಳು ಈ ದುಷ್ಚಟಕ್ಕೆ ಬಲಿಯಾದ ಘಟನೆ ನಮ್ಮ ಮುಂದಿದೆ. ನೆರೆಯ ಪಾಕಿಸ್ತಾನದಿಂದ ಇದರ ವ್ಯವಸ್ಥಿತ ಸರಬರಾಜು ನಡೆಯುತ್ತಿದೆ ಎಂಬ ಗುಮಾನಿಯೂ ಇದೆ. ಅದರಲ್ಲೂ ಕರಾವಳಿ ಪ್ರದೇಶ ವಾಮಮಾರ್ಗ ಕರುಣಿಸಿ ಡ್ರಗ್ ಮಾಫಿಯಾಕ್ಕೆ ತೆರೆದುಕೊಂಡಿದೆ. ಹಾಗಿದ್ದರೆ, ಡ್ರಗ್ಸ್ ಅಥವಾ ಮಾದಕ ವಸ್ತುಗಳ ಕುರಿತಾದ ಪಕ್ಷಿ ನೋಟ ಇಲ್ಲಿದೆ. ಮಾನಸಿಕ ಮತ್ತು ದೈಹಿಕ ಬದಲಾವಣೆಗೆ ಕಾರಣವಾಗುವ ವಸ್ತುಗಳಿಗೆ ಮಾದಕ ವಸ್ತು ಎನ್ನಲಾಗುತ್ತದೆ. ಇದು ಘನ, ದ್ರವ ಅಥವಾ ಅನಿಲ ರೂಪದಲ್ಲಿರುತ್ತದೆ. ವ್ಯಕ್ತಿಯ ನರಮಂಡಲದ ಮೇಲೆ ಪ್ರಭಾವ ಬೀರುವ ಮೂರು ಮುಖ್ಯ ಮಾದಕ ವಸ್ತುಗಳ ವಿಧಗಳು: ಡಿಪ

ಒಂದು ಸಾಲಿನ ಕತೆ

ಒಂದೇ ಸಾಲಿನಲ್ಲಿ ಉತ್ತರಿಸಲಾಗದು ಬದುಕೆಂಬ ಕ್ಲಿಷ್ಟ ಪ್ರಶ್ನೆ ಪತ್ರಿಕೆಗೆ. ಆಕಾಶಕ್ಕೆ ಏಣಿ ಇಟ್ಟಂತೆ, ಜೀವಮಾನವೇ ಜಾರಿ ಹೋಗುತ್ತದೆ. ದಿನ, ವಾರ, ತಿಂಗಳು ಕೊನೆಗೆ ಸಾಲು ಸಾಲಾಗಿ. ಪರಿವೆಯೇ ಇಲ್ಲದೆ ಕಳೆದುಹೋಗುತ್ತವೆ, ರಾತ್ರಿ ಬೆಳಗಾದಂತೆ ಸಾಲುಗಳು! ಈ ಸಾಲಿನಲ್ಲಿ ಆಗದ್ದು, ಮುಂದಿನ ಸಾಲಿನಲ್ಲಿ ಮಾಡುವ ಇರಾದೆ, ಪ್ರೌಢಿಮೆಯ ಭ್ರಮೆ ಮೈಮನವಿಡೀ ಹಬ್ಬುತ್ತದೆ, ಕಾಲಾಂತರ ಕಡೆಗಣಿಸಿ. ದಿನ ಎಣಿಸಿ, ಗುಣಿಸಿ, ಭಾಗಿಸುವಷ್ಟರಲ್ಲಿ ಆ ಸಾಲೂ ತುಳಿದಿರುತ್ತದೆ ನಿರ್ಗಮನದ ಹಾದಿ. ಮನಸ್ಸು ಮರುಗುತ್ತದೆ ಸಾಲು ಸಾಲುವುದಿಲ್ಲವೆಂದು. ಖಾಲಿ ಕೈಯಲ್ಲಿ ಬಂದು ಹೋಗುವ ನಮಗೂ, ಸಾಲುಗಳಿಗೂ ವ್ಯತ್ಯಾಸವಿಲ್ಲ. ಇಪ್ಪತ್ತೈದರ ಗುಣಾಕಾರದ ಹಬ್ಬಗಳಿಗೆ ಯಾವ ಸಾಲಿನ ಹಂಗಿಹುದೋ ಜಾಸ್ತಿ ? ಸಾಧನೆ, ಪ್ರತಿಷ್ಠೆಯ ಬೆಂಬತ್ತುವ ನಾವು ಸಾಲುಗಳ ಸಾಲಗಾರರಲ್ಲವೆ ? ನೋಡು-ನೋಡುತ್ತಿದ್ದಂತೆ ಮತ್ತೆ ಬಂದೆರಗುತ್ತದೆ, ಯಾವ ಭಕ್ಷೀಸನ್ನೂ ಬೇಡದೆ ಹೊಸ ಸಾಲು, ಹೊಸ ಸವಾಲು, ಹೊಸ ಅಹವಾಲು..!! (ಕೃಪೆ : ಕನ್ನಡ ಪ್ರಭ ) Deevatige by Sandeep Phadke is licensed under a Creative Commons Attribution-NonCommercial 4.0 International License . Based on a work at http://www.deevatige.blogspot.in/ .