ಬೀಸುಗತ್ತಿಗೆ ಸಿಲುಕಿ ಗಾಳಿ ಚೀರುತ್ತಿದೆ
ಒಡನಾಡಿಯ ದುಡುಕಿಗೆ ಬೆದರಿ.
ದಣಿವರಿಯುವ ಜೀವಗಳಿಗೆ ತಂಪೆರೆದು
ಮುದ ನೀಡುವ ತಂಗಾಳಿಗೆ
ಇದೆಂತಹ ಅವಮಾನ..!
ಬರಡು ನೆಲ, ನದಿ-ಸಾಗರಗಳ ಮಿಂದೆದ್ದು
ಎಲ್ಲೆ ಮೀರುವಂತೆ ಬಹುದೂರ ಚಾಚಿದೆ.
ಅಲೆಮಾರಿಯಂತೆ ಅಲಿದು
ಭೇದವಿಲ್ಲದೆ ಭಾವ ಬೆಸೆಯುವ
ದಯಾಮಯಿ ದಿಕ್ಕೆಟ್ಟಿದೆ..!
ಮನುಕುಲದ ಅಸಹನೆ ತಾಳಲಾರದೆ
ಕೆಲವೊಮ್ಮೆ ಚಂಡಮಾರುತವಾಗುತ್ತದೆ.
ತನ್ನ ಇರುವಿಕೆಯನ್ನು ಪ್ರಶ್ನಿಸಿ
ಅಲ್ಲಿ-ಇಲ್ಲಿ ನಡೆಸಿದ ಪ್ರತಿಭಟನೆಗೆ
ನೆಲಕಚ್ಚಿದವರು ಲೆಕ್ಕವಿಲ್ಲ..!
ಪ್ರಾಣ ವಾಯುವೇ ತೇಲಿಹೋದಾಗ
ಮಂದ್ರ ಮಾರುತದ ನೆನೆಗುದಿಗೆ
ಬಿದ್ದ ಮನವಿ ನೆನಪಾಗುತ್ತದೆ.
ಹೃದಯ ಭಾಗದಲ್ಲೊಂದು ಕಾನನ,
ನಡು-ನಡುವೆ ಹರಿವ ನಿರ್ಮಲ ನೀರು..!
Comments