Skip to main content

ಜಾರಿ ಹೋಗುವ ಕಾನೂನು




ಕಾನೂನಿನ ದೃಷ್ಟಿಯಿಂದ ಎಲ್ಲರೂ ಒಂದೇ. ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನಾತ್ಮಕ ವ್ಯವಸ್ಥೆಯಿರುವ ಭಾರತದಲ್ಲಿ ಇದು ಎಷ್ಟು ಸತ್ಯವೆನ್ನುವುದು ಮಾತ್ರ ಪ್ರಶ್ನಾರ್ಥಕ. ಉತ್ತಮ ಆಡಳಿತದ ಸೂತ್ರದಂತಿರಬೇಕಾದ ಕಾನೂನು ಯಾರದೋ ಕೈ ಗೊಂಬೆಯಾಗುತ್ತಿದೆ. ದೆಹಲಿ ಅತ್ಯಾಚಾರ ಪ್ರಕರಣದ ಸಂದರ್ಭ, ಕಾನೂನು ಸಮರಕ್ಕೆ ಒಂದಷ್ಟು ಜನ ಜಮಾಯಿಸಿದ್ದರೆ, ಅವರ ವಿರುದ್ಧ ಕಿಡಿಕಾರುವ ಉದ್ಧಟತನ ಸರ್ಕಾರ ತೋರಿತ್ತು. ಬಹುಕೋಟಿ ಹಗರಣಗಳ ಕಳಂಕ ಹೊತ್ತಿದ್ದರೂ, ನಮ್ಮನ್ನು ಆಳುವ ದೊರೆಗಳು ಅದನ್ನೆಲ್ಲಾ ಸಮರ್ಥಿಸಿಕೊಳ್ಳುತ್ತಾರೆ. ಹೀಗೆ ಕಾನೂನಿರುವುದೇ ಮುರಿಯುವುದಕ್ಕೆ ಎಂದಾದರೆ ಹೊಸ ಕಾನೂನು ಜಾರಿಯಾದರೂ ಊಟಕ್ಕಿಲ್ಲದ ಉಪ್ಪಿನಕಾಯಿಯಂತಿರುತ್ತದೆ.

ಭ್ರಷ್ಟ ಮತ್ತು ದುರ್ಬಲ ಆಡಳಿತ ಭಾರತೀಯ ರಾಜತಾಂತ್ರಿಕ ವ್ಯವಸ್ಥೆ ಹದಗೆಡಲು ಮೂಲ ಕಾರಣವೆಂದು ಜನಜನಿತವಾಗಿದೆ. ಆದರೂ ಪ್ರತಿ ಚುನಾವಣೆಯ ವೇಳೆ ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆಂಬ ಬೊಗಳೆ ಕೇಳುತ್ತೇವೆ. ಈ ಸಲುವಾಗಿ, ಅಮೂಲ್ಯ ಮತಗಳನ್ನು ಪಡೆಯಲು ಹಣ-ಹೆಂಡ, ಸೀರೆ ಮತ್ತು ಪ್ರವಾಸ ಕೈಗೊಳ್ಳುವ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ಇದರಿಂದ ಜನರ ಯಾವ ಬೇಡಿಕೆಗಳೂ ಈಡೇರಿದಂತಾಗುವುದಿಲ್ಲ. ಭ್ರಷ್ಟಾಚಾರ ನಿರ್ಮೂಲನೆಗೆ ಕಾನೂನಿನಲ್ಲಿ  ಬದಲಾವಣೆ ಕೋರಿ ಲೋಕಾಯುಕ್ತದ ಬೇಡಿಕೆ ನೆನೆಗುದಿಗೆ ಬಿದ್ದಿದೆ. ವಿಪಕ್ಷಗಳು ಜನರ ಬಾಯಿ ಮುಚ್ಚಿಸಲು ಹರಿಹಾಯುತ್ತವೆ ಹೊರತು ಬದಲಾವಣೆಗೆ ಅವುಗಳೂ ಅಡ್ಡಗಾಲಿಡುತ್ತವೆ. ನಮ್ಮಲ್ಲಿ ಉತ್ತಮ ನ್ಯಾಯಾಂಗ ವ್ಯವಸ್ಥೆಯಿದ್ದರೂ, ಇದರ ನಿಲುವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲ ಪ್ರಯತ್ನಗಳಾಗುತ್ತಿವೆ. ಅಕ್ರಮ ಭೂ ಕಬಳಿಕೆ, ತೆರಿಗೆ ವಂಚನೆ, ಸಾಮಾಜಿಕ ಮತ್ತು ಲಿಂಗ ತಾರತಮ್ಯದ ಪ್ರಕರಣಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದೂಡುವ ಅಗತ್ಯವೇನಿದೆ? ಪ್ರತಿರೋಧ ಒಡ್ಡಲು ಮೀನಮೇಷ ಎಣಿಸುವುದಾದರೆ, ನಿಜಾರ್ಥದಲ್ಲಿ ಕಾನೂನಿನ ಸದ್ಬಳಕೆ ಆಗುವುದಾದರೂ ಹೇಗೆ?
ಅಲ್ಪ ದಂಡನೆಯ ಪ್ರಮಾಣ ಮತ್ತು ಅಧಿಕಾರ ವರ್ಗದವರ ರಕ್ಷಣೆಯಿಂದಾಗಿ ಸಮಾಜ ವಿರೋಧಿ ಕಾರ್ಯಗಳು ಅವ್ಯಾಹತವಾಗಿ ನಡೆಯುತ್ತಿವೆ. ಹೀಗಾಗಿ ಶಿಕ್ಷಾರ್ಹ ಅಪರಾಧಗಳೂ, ಅಪರಾಧವೇ ಅಲ್ಲವೆಂಬಂತೆ ಸಾಬೀತಾಗುತ್ತಿವೆ. ಇದರಿಂದಾಗಿ ಶಿಕ್ಷೆಯ ಕುರಿತು ಇರಬೇಕಾದ ಸಹಜ ಭಯ ದೂರವಾಗುತ್ತಿದೆ. ಕೇವಲ ಮರಣ ದಂಡನೆಯೆ ಅಂತಿಮವಾದ ಅಪರಾಧಗಳು ಮಾತ್ರ ಸಾಮಾಜಿಕ ಹೊಣೆಗಾರಿಕೆ ಮತ್ತು ವಿದ್ರೋಹಿ ಕೆಲಸಗಳ ಪರಿಣಾಮದ ಅರಿವು ಮೂಡಿಸುತ್ತಿವೆ. ಆದ್ದರಿಂದ ನ್ಯಾಯ-ಅನ್ಯಾಯದ ಬಗ್ಗೆ ನಾಗರಿಕ ಪ್ರಜ್ಞೆ ಜಾಗೃತಗೊಳಿಸಲು ಮುಂದಾಗಬೇಕಿದೆ. ಆದರೆ ಇದು ಇಂದಿನಿಂದ ನಾಳೆಗೆ ಸರಿದೂಗಿಸಲು ಅಸಾಧ್ಯ. ಸಂಕೀರ್ಣ ಸಮಸ್ಯೆಗಳನ್ನು ಹೆಗಲ ಮೇಲೆ ಹೊತ್ತಿರುವ ದೇಶದ ಆಡಳಿತ ವ್ಯವಸ್ಥೆ, ಸದ್ಯ ಇದನ್ನು ನಿರ್ವಹಿಸುವ ಸ್ಥಿತಿಯಲ್ಲಿಲ್ಲ. ಒಂದು ವೇಳೆ ಸ್ಥಳೀಯ ನ್ಯಾಯ ಪಂಚಾಯಿತಿಗೆ ಹೆಚ್ಚಿನ ಅಧಿಕಾರ ನೀಡಿದರೆ, ಆಯಾಯ ಪ್ರದೇಶದ ಸಮಸ್ಯೆಗೆ ತ್ವರಿದ ಪರಿಹಾರ ದೊರಕಬಹುದು. ಅಲ್ಲದೇ, ಆಂತರಿಕ ಭದ್ರತೆಯೂ ನೆಲೆಯೂರಲು ಸಾಧ್ಯವಾಗಬಹುದು.
ಕಾನೂನು ಸುವ್ಯವಸ್ಥೆ ಕಾಪಾಡಲು ಕಾನೂನಿನ ಪುನರ್ ಪರಿಶೀಲನೆ, ಬದಲಾವಣೆ ಮತ್ತು ಹೊಸತೊಂದರ ಸೇರ್ಪಡೆಯೂ ಮುಖ್ಯ. ಸಾಮಾಜಿಕ ಪರಿವರ್ತನೆಯಾದಂತೆ, ಜನರ ಭಾವನಾತ್ಮಕ ಗುಣದಲ್ಲೂ ಏರುಪೇರು ಉಂಟಾಗುತ್ತದೆ. ಇದಕ್ಕೆ ಬಾಹ್ಯ ಚಟುವಟಿಕೆಗಳ ಪ್ರೇರಣೆಯೂ ಇರಬಹುದು. ಆದರೆ ಅಮಾಯಕರು ಇದರಿಂದಾಗಿ ಬಲಿಯಾಗದಂತೆ ತಡೆಯಲು ಸೂಕ್ತ ಕಾನೂನೊಂದರ ಬೆಂಬಲ ಬೇಕು. ದೇಶವ್ಯಾಪಿ ತಲ್ಲಣ ಉಂಟುಮಾಡಿದ್ದ ದೆಹಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಅತ್ಯಾಚಾರ ತಡೆ’ ಮಸೂದೆ ಅಂಗೀಕಾರಗೊಂಡು ಕಾನೂನಾಗಿ ಜಾರಿಯಾಗಿದೆ. ಈ ಹಿಂದೆ ಇಂತಹ ಸಾವಿರಾರು ಪ್ರಕರಣಗಳು ನಡೆದಿವೆ. ಹಲವರ ಮಾನ-ಪ್ರಾಣ ಹಾನಿಯಾಗಿದೆ. ಅರುಣಾ ಶಾನುಭಾಗ್ ಎಂಬ ದಾದಿ ಮಾನಸಿಕ ಆಘಾತಕ್ಕೊಳಗಾಗಿ ಇಂದಿಗೂ ಸಾವು-ಬದುಕಿನ ಜೊತೆ ಸೆಣಸಾಡುತ್ತಿದ್ದಾಳೆ. ಡಕಾಯಿತಿ ರಾಣಿ ಪೂಲಂ ದೇವಿ, ಅತ್ಯಾಚಾರಕ್ಕೊಳಗಾದ ಮೇಲೆಯೆ ಸೇಡಿಗಾಗಿ ತನ್ನ ವೀರಾವೇಶ ಪ್ರದರ್ಶಿಸಿದ್ದು. ಆದರೆ ಬಾಣಲೆಯಿಂದ ಬೆಂಕಿಗೆ ಬಿದ್ದಾಗ ಮಾತ್ರ ಎಚ್ಚೆತ್ತುಕೊಳ್ಳುವ ಸರ್ಕಾರ ಈಗಲಾದರೂ ಮಾನವೀಯತೆ ಮೆರೆದಿದೆ ಎನ್ನಬಹುದು. ದೇಶವೇ ತಲೆತಗ್ಗಿಸುವಂತೆ ಮಾಡುತ್ತಿರುವ ಮೃಗೀಯ ವರ್ತನೆಗಳಿಗೆ ಅಂಕುಶ ಬೀಳುವ ಆಶಾಭಾವ ಹುಟ್ಟಿಕೊಂಡಿದೆ. ಇಷ್ಟಾದರೂ, ಕಾನೂನು ಕನ್ನಡಿಯೊಳಗಿನ ಗಂಟಾಗದಂತೆ ನಿಗಾ ವಹಿಸುವುದೇ ನಮ್ಮ ಮುಂದಿರುವ ದೊಡ್ಡ ಸವಾಲು.

 

Comments

Popular posts from this blog

ಯುವ ಜನತೆ ಮತ್ತು ಸಾಮಾಜಿಕ ತಾಣಗಳು

        ಸಂ ಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.        ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.ಇದರಲ್ಲಿ ಒಂದಷ್ಟು ಸತ್ಯವಿದೆ.ದಿನದ ಸುಮಾರು

ಮಾದಕ ಅಧ್ವಾನ

ಧೂ ಮಪಾನ, ಮದ್ಯಪಾನದಂತೆ ಮಾದಕ ದ್ರವ್ಯ ಸೇವನೆಯ ಚಟ ಹೊಸ ತಲೆಮಾರಿನ ಯುವಕ/ಯುವತಿಯರಲ್ಲಿ ವಿದೇಶಿ ಮೋಹದಂತೆ ಸದ್ದಿಲ್ಲದೆ ಹರಡುತ್ತಿದೆ. ಷೋಕಿಗಾಗಿ, ದೈಹಿಕ ಮತ್ತು ಮಾನಸಿಕ ನೋವಿನಿಂದ ಕೆಲ ಕ್ಷಣ ದೂರವಾಗಲು ಇದರ ಬಳಕೆಯಾಗುತ್ತಿದೆ. ಇದಕ್ಕೆ ದಾಸರಾಗುವವರಲ್ಲಿ ಹೆಚ್ಚಿನವರು 18 ರಿಂದ 30 ವರ್ಷದೊಳಗಿನವರು. ಜಗತ್ತಿನೆಲ್ಲೆಡೆ ಸುಮಾರು 500 ಬಿಲಿಯನ್ ಮೊತ್ತದ ಮಾದಕ ವಸ್ತುಗಳ ವಹಿವಾಟು ನಡೆಯುತ್ತದೆ. ಪೆಟ್ರೋಲಿಯಂ ಮತ್ತು ಶಸ್ತ್ರಾಸ್ತ್ರ ಉದ್ದಿಮೆಯ ನಂತರದ ಸ್ಥಾನ ದಕ್ಕಿದೆ! ಪ್ರತಿಷ್ಠೆ ಎಂದುಕೊಂಡಿರುವ ಯುವ ಜನಾಂಗದ ಮೊಂಡುತನ, ಸಾವಿನ ಬಾಗಿಲು ತಟ್ಟುವಂತೆಯೂ ಮಾಡಿದೆ. ದೇಶದಲ್ಲಿ ಸುಮಾರು ಒಂದು ಕೋಟಿ ಹೆರಾಯಿನ್ ವ್ಯಸನಿಗಳಿದ್ದಾರೆ. ಕೆಲ ತಿಂಗಳ ಹಿಂದೆ, ಮಂಗಳೂರಿನ ವಿದ್ಯಾರ್ಥಿನಿಯೋರ್ವಳು ಈ ದುಷ್ಚಟಕ್ಕೆ ಬಲಿಯಾದ ಘಟನೆ ನಮ್ಮ ಮುಂದಿದೆ. ನೆರೆಯ ಪಾಕಿಸ್ತಾನದಿಂದ ಇದರ ವ್ಯವಸ್ಥಿತ ಸರಬರಾಜು ನಡೆಯುತ್ತಿದೆ ಎಂಬ ಗುಮಾನಿಯೂ ಇದೆ. ಅದರಲ್ಲೂ ಕರಾವಳಿ ಪ್ರದೇಶ ವಾಮಮಾರ್ಗ ಕರುಣಿಸಿ ಡ್ರಗ್ ಮಾಫಿಯಾಕ್ಕೆ ತೆರೆದುಕೊಂಡಿದೆ. ಹಾಗಿದ್ದರೆ, ಡ್ರಗ್ಸ್ ಅಥವಾ ಮಾದಕ ವಸ್ತುಗಳ ಕುರಿತಾದ ಪಕ್ಷಿ ನೋಟ ಇಲ್ಲಿದೆ. ಮಾನಸಿಕ ಮತ್ತು ದೈಹಿಕ ಬದಲಾವಣೆಗೆ ಕಾರಣವಾಗುವ ವಸ್ತುಗಳಿಗೆ ಮಾದಕ ವಸ್ತು ಎನ್ನಲಾಗುತ್ತದೆ. ಇದು ಘನ, ದ್ರವ ಅಥವಾ ಅನಿಲ ರೂಪದಲ್ಲಿರುತ್ತದೆ. ವ್ಯಕ್ತಿಯ ನರಮಂಡಲದ ಮೇಲೆ ಪ್ರಭಾವ ಬೀರುವ ಮೂರು ಮುಖ್ಯ ಮಾದಕ ವಸ್ತುಗಳ ವಿಧಗಳು: ಡಿಪ

ಇಬ್ಬನಿ

ಮುಂಜಾವಿನ ತೆಕ್ಕೆಯೊಳು  ಹಸಿರುಟ್ಟ ಭೂರಮೆಯ  ಒಡಲಲ್ಲಿ  ಹನಿಯುತಿವೆ ಹನಿಗಳು  ಸಾಲು ಸಾಲಾಗಿ...  ಮರ-ಗಿಡಗಳ ಎಲೆಗಳ ಮೇಲೆ ದೃಶ್ಯವಾಗುತ್ತವೆ  ದಣಿದ-ಮಣಿದ ಮೈ-ಮನಕ್ಕೆ  ಜೀವ ತುಂಬುತ್ತವೆ ಪನ್ನೀರ ಪಸರುತ್ತಾ... ಅಲ್ಪಾಯುಷಿಯಾದರು  ದೀಪದ ಬುಡ್ಡಿಯಂತೆ ಉದಾರ ಗುಣ  ಚಳಿಯನ್ನೂ ಲೆಕ್ಕಿಸದೇ  ಅವಿರತ ದುಡಿಮೆ... ಬೆಳಕಿನ ಪರದೆ ಸರಿದಂತೆ  ಮತ್ತಷ್ಟು ಮೆರುಗು ಕ್ಷಣಮಾತ್ರದಲ್ಲಿ  ಜೀವದ ಹಂಗು ತೊರೆದು  ಮಂಗ ಮಾಯ... ತನ್ನ ಶಾಂತ ಚಿತ್ತ ಸೌಮ್ಯ ಸ್ವಭಾವ  ಮತ್ತೆ ಹುಟ್ಟಲು ಕಾರಣ ಇಬ್ಬನಿ ಇರಿಯುವುದಿಲ್ಲ ಇಹ-ಪರರ ... ದೀವಟಿಗೆ by Sandeep Phadke is licensed under a Creative Commons Attribution-NonCommercial-NoDerivs 2.5 India License .