(ಸಾಹಿತ್ಯ ಸಮ್ಮೇಳನಗಳು ಜೀವಂತಿಕೆ ಕಳೆದುಕೊಳ್ಳುತ್ತಿವೆ ಎಂಬ ವಾದಕ್ಕೆ ಪೂರಕ ಪ್ರತಿಕ್ರಿಯೆ)
ಸಾಹಿತ್ಯ ಎಲ್ಲರ ಬದುಕಿನ ಒಂದು ಅಂಗ. ಇದರ ಅನೇಕ ಪ್ರಕಾರಗಳಲ್ಲಿ
ಹಲವು ಕ್ಷೇತ್ರಗಳಿಂದ ಪಡೆದ ಅನುಭವವಗಳು ಗದ್ಯ-ಪದ್ಯದ ರೂಪದಲ್ಲಿ ಅಭಿವ್ಯಕ್ತಗೊಳ್ಳುತ್ತವೆ. ಇಂತಹ
ಕೃತಿಗಳ ವಿಮರ್ಶೆ ಮತ್ತು ಮೌಲ್ಯವರ್ಧನೆಗಿರುವ
ಸಮ್ಮೇಳನಗಳು ಇತ್ತೀಚೆಗೆ ಕಳೆಗುಂದುತ್ತಿರುವುದು ವಿಷಾದನೀಯ. ದೃಶ್ಯ ಮಾಧ್ಯಮಗಳ ಹಾವಳಿಯ ಬಿಸಿ ತಟ್ಟಿರುವುದು
ನಿಜ. ಆದರೆ ಸಾಹಿತ್ಯಾಭಿಮಾನಿಗಳು ಇದರಿಂದ ವಿಚಲಿತರಾಗಲು ಸಾಧ್ಯವಿಲ್ಲ. ಹಾಗಾಗಿ ಸಂಘಟನೆಯಲ್ಲೇ ಲೋಪವಿರುವುದು
ಮೇಲ್ನೋಟಕ್ಕೆ ಕಂಡು ಬರುತ್ತದೆ. ಕೋಟಿ-ಕೋಟಿ ಸುರಿದು ನಡೆಸುವ ಸಮ್ಮೇಳನದ ಪ್ರಯೋಜನ ಶೂನ್ಯವೆಂದಾದರೆ,
ಯಾರದೋ ಕಿಸೆ ತುಂಬಿಸಲು ವರ್ಷಂಪ್ರತಿ ನಡೆಯುತ್ತಿದೆಯೇ? ಪ್ರತಿ ಬಾರಿ ಸಮ್ಮೇಳನ ನಡೆಯುವಾಗ ಬೇಕಾಗುವ
ಚಪ್ಪರ, ಊಟೋಪಚಾರ ಮತ್ತು ವಸತಿ ವ್ಯವಸ್ಥೆಗಳೇ ಅಬ್ಬರದ ಪ್ರಚಾರ ಗಿಟ್ಟಿಸುತ್ತವೆಯೇ ಹೊರತು ಸಾಹಿತ್ಯ
ಕೈಂಕರ್ಯವಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ-ಮಾನ ದೊರೆತ ಮೇಲಾದರೂ ಕಾಟಾಚಾರಕ್ಕೆ ನಡೆಯದೆ, ಗಂಭೀರ
ರೀತಿಯಲ್ಲಿ ಕಾರ್ಯೋನ್ಮುಖವಾಗಬೇಕಿತ್ತು. ಆದರೆ ವೈಮನಸ್ಸುಗಳನ್ನು ಹೊರ ಹಾಕುವ, ರಾಜಕೀಯದ ಛಾಯೆ ಕಾಣುವ
ವೇದಿಕೆಯಾಗುತ್ತಿದೆ. ವೃತ್ತಿ ಮತ್ಸರ ಹೇಗೋ, ಹಾಗೆಯೆ ಪ್ರವೃತ್ತಿ ಮತ್ಸರವಿರುವುದು ಸಹಜ. ಆದರೆ ಇಂತಹ
ವೈಯುಕ್ತಿಕ ಭಿನ್ನಾಭಿಪ್ರಾಯಗಳನ್ನು ಸಮ್ಮೇಳನಗಳಲ್ಲಿ ತೋರಿಸುವುದರಿಂದ ಸಾಹಿತ್ಯಾಭಿಮಾನಿಗಳಲ್ಲೂ ನಿರಾಸಕ್ತಿಗೆ
ಕಾರಣವಾಗುತ್ತದೆ. ರಾಜಕೀಯ ಅಧಿವೇಶನಗಳಲ್ಲಾಗುವ ಗೌಜಿ-ಗದ್ದಲಗಳು ಸಾಹಿತ್ಯ ಸಮ್ಮೇಳನಗಳಲ್ಲೂ ನಡೆಯುತ್ತಿರುವುದು
ಶೋಭೆ ತರುವ ವಿಷಯವಲ್ಲ. ಆದರೆ ಇವೆಲ್ಲವೂ ಇಲ್ಲದೆ ಸಮ್ಮೇಳನ ನಡೆದರೆ ಆಶ್ಚರ್ಯವೆನ್ನುವ ಮಟ್ಟಿಗೆ ಬಂದಿದೆ.
ಸಾಹಿತ್ಯ ಸಮ್ಮೇಳನಗಳು ಜನ ಜಾತ್ರೆಯಾಗದೆ, ನಾಡು ನುಡಿಯ
ಕುರಿತು ಚಿಂತನೆಗೀಡು ಮಾಡುವಂತಿರಬೇಕು, ಇದಕ್ಕೆ ಪೂರಕವಾಗಿ ಪೂರ್ವಭಾವಿ ಸಿದ್ಧತೆಗಳ ಮೇಲೆ ನಿಗಾವಹಿಸಬೇಕು.
ಬೇಕಾದರೆ ಮೂರು-ನಾಲ್ಕು ವರ್ಷಗಳಿಗೊಮ್ಮೆ ಸಮ್ಮೇಳನ ನಡೆದರೂ ಸರಿ. ಆದರೆ ಅದರ ತಯಾರಿ ಕನಿಷ್ಠ ಒಂದು
ವರ್ಷ ಮುಂಚಿತವಾಗಿ ಶುರುವಾಗಬೇಕು. ಪ್ರತಿ ಸಮ್ಮೇಳನವೂ ಒಂದು ‘ಥೀಮ್’ನ ಜೊತೆ ಸಾಗಬೇಕು. ಮುಖ್ಯವಾಗಿ
ಚರ್ಚೆಯಾಗಲಿರುವ ವಿಷಯದ ಕುರಿತು ಜನರಿಗೆ ಸಮ್ಮೇಳನದ ಮೊದಲೇ ಸಾಕಷ್ಟು ಮಾಹಿತಿ ನೀಡುವ ಕೆಲಸವಾಗುತ್ತಿಲ್ಲ.
ಇದರಿಂದಾಗಿ ಗೋಷ್ಠಿಗಳು ನಿಜ ಸ್ವರೂಪವನ್ನು ಕಳೆದುಕೊಳ್ಳತ್ತಿವೆ. ವಿನಾಯಕ ಭಟ್ಟರು ಪ್ರಸ್ತಾಪಿಸಿರುವಂತೆ
ಕವಿಗೋಷ್ಠಿಗೆ ಆಯ್ಕೆ ಪ್ರಕ್ರಿಯೆಯ ಮಾನದಂಡ ಬೇಕು. ಇದಕ್ಕೆ ತಾಲೂಕು, ಜಿಲ್ಲಾವಾರು ನಡೆಯುವ ಸಾಹಿತ್ಯ
ಸಮ್ಮೇಳನಗಳಿಂದ ಆಯ್ಕೆ ಮಾಡುವ ವಿಧಾನ ಅಳವಡಿಸಿದ್ದಲ್ಲಿ ಸ್ಪರ್ಧಾ ಮನೋಭಾವ ಹುಟ್ಟುತ್ತದೆ. ಇದರಿಂದ
ಹೊಸ ಪ್ರತಿಭೆಗಳು, ನವೀನ ಪ್ರಯೋಗಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ. ಒಂದೊಮ್ಮೆ ‘ಬ್ರಾಂಡ್’ ಆದ
ಮೇಲೆ ಆನೆ ನಡೆದಿದ್ದೇ ದಾರಿ ಎನ್ನುವ ಮನಸ್ಥಿತಿಯ ಕೆಲ ಸಾಹಿತಿಗಳು ಅನ್ಯ ಮನಸ್ಕರಾಗಿ ವಿಚಾರ ಮಂಡನೆ
ಮಾಡುವುದು ನಿಲ್ಲಬೇಕು. ಅಂತರ್ಜಾಲದ ಸಹಾಯ ಪಡೆದು ನೂರಾರು
ಬ್ಲಾಗುಗಳು ಮತ್ತು ಜಾಲತಾಣಗಳು ಕನ್ನಡದ ಅಳಿಲು ಸೇವೆ ಮಾಡುತ್ತಿವೆ. ಇವೆಲ್ಲವನ್ನು ‘ಕಾರ್ಪೊರೇಟ್
ಸಾಹಿತ್ಯ’ವೆಂದು ಅಲ್ಲಗಳೆಯುವುದು ತರವಲ್ಲ. ಸಮ್ಮೇಳನದ ಅವಸರದಲ್ಲಿ ಬಿಡುಗಡೆಯಾಗಬೇಕಾದ ಸ್ಮರಣ ಸಂಚಿಕೆ
ನಿಧಾನವಾಗಿ ಪ್ರಕಟವಾಗುವುದರಿಂದ, ಕೊನೆ ಪಕ್ಷ ಅದರಲ್ಲಿನ ಎಲ್ಲ ಮಾಹಿತಿ, ಪ್ರಬಂಧ ಮಂಡನೆಗಳನ್ನು
‘ಕಣಜ’ದಲ್ಲಿ (kanaja.in) ತುಂಬಿಸುವ ಕೆಲಸವಾಗಬೇಕು. ಇದರಿಂದ ಸಾಹಿತ್ಯಾಸಕ್ತರಿಗೆ ಅನುಕೂಲವಾಗುವುದಲ್ಲದೆ,
ಸಮ್ಮೇಳನದ ಅಂಶಗಳನ್ನು ಜೀವಂತವಾಗಿಡಲು ಸಾಧ್ಯ. ಕಾಲ ಬದಲಾದಂತೆ ಚರ್ವಿತ ಚರ್ವಣ ಬಿಟ್ಟು ಭಾಷೆಯ ಬೆಳವಣಿಗೆಗೆ
ಇರುವ ಹೊಸ ಸವಾಲುಗಳ ಕಡೆ ಗಮನಹರಿಸಬೇಕಿದೆ.
ದೀವಟಿಗೆ by ಸಂದೀಪ ಫಡ್ಕೆ, ಮುಂಡಾಜೆ is licensed under a Creative Commons Attribution-NonCommercial-NoDerivs 2.5 India License
Comments