ಸ್ವಾಮಿ ವಿವೇಕಾನಂದರು 1893ರ ಚಿಕಾಗೊ
ವಿಶ್ವ ಧರ್ಮ ಸಮ್ಮೇಳನದಲ್ಲಿ ‘ಸಹೋದರಿಯರೇ, ಸಹೋದರರೇ’ ಎಂದು ಉದ್ಗರಿಸಿದ ಭಾಷಣ ಎಲ್ಲರನ್ನೂ ಚಕಿತಗೊಳಿಸಿತ್ತು.
ಭಾರತೀಯರಲ್ಲಿ ಸಹೋದರತಾ ಭಾವಕ್ಕಿರುವ ತತ್ಪರತೆ ವಿಶ್ವಕ್ಕೇ ಪಾಠವಾಯಿತು. ಸ್ನೇಹ-ಸೌಹಾರ್ದತೆಯಿಂದ
‘ನಾವು ಭಾರತೀಯರು’ ಎಂದು ಎದೆ ಹಿಗ್ಗಿಸುವಂತೆ ಮಾಡಿತು. ಆದರೆ ಈ ಅಮೂರ್ತ ಘಳಿಗೆ ಇತಿಹಾಸದ ಪುಟ ಸೇರುತ್ತಿದ್ದಂತೆ
ಹಾಸು-ಹೊಕ್ಕಾಗಿ ಬೆಳೆಯಬೇಕಿದ್ದ ಸಹೋದರತೆಯ ತತ್ವಗಳು ನೆನೆಗುದಿಗೆ ಬಿದ್ದವು. ಪ್ರಕೃತಿಯ ಎರಡು ಜಾತಿಗಳಾದ
ಗಂಡು-ಹೆಣ್ಣುಗಳ ನಡುವೆ ಅಸಮಾನತೆ ಭುಗಿಲೆದ್ದಿತು. ಇದೀಗ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಬದುಕುವ
ಹಕ್ಕನ್ನೂ ಕಸಿದುಕೊಳ್ಳುವ ಮಟ್ಟಕ್ಕೆ ಬಂದು ನಿಂತಿದೆ. ‘ಮಾತೃ ದೇವೋ ಭವಃ’ ಎಂದು ಮೊದಲ ಸ್ಥಾನದಲ್ಲಿಟ್ಟು
ಪೂಜಿಸುವ ಸಂಸ್ಕೃತಿಯ ನಡುವೆ ಅತ್ಯಾಚಾರ,ಕೊಲೆ,ವಂಚನೆ,ಭ್ರೂಣ ಹತ್ಯೆಯಂತಹ ಪ್ರಕರಣಗಳು ಸದ್ದಿಲ್ಲದೇ
ನಡೆಯುತ್ತಲೇ ಇವೆ. ಸಮಾಜ ಘಾತುಕ ಶಕ್ತಿಗಳು ದೇಶದ ಪರಂಪರೆಯನ್ನು ಹಾಳುಗೆಡವುತ್ತಿವೆ. ಅತ್ಯಾಚಾರ,
ಲೈಂಗಿಕ ಕಿರುಕುಳದಂತಹ ಹೇಯ ಕೃತ್ಯಗಳು ಹಳ್ಳಿಯಿಂದ ದಿಲ್ಲಿಯವರೆಗೆ ವಿಜೃಂಭಿಸುತ್ತಿವೆ. ದೇಶದ ರಾಜಧಾನಿಯಲ್ಲಿ
ಇತ್ತೀಚೆಗೆ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿರುವುದು ಎಲ್ಲರೂ ಅರಾಜಕತೆಯ ಕಡೆ ಬೊಟ್ಟು ಮಾಡುವಂತೆ
ಮಾಡಿದೆ. ಪ್ರತಿಭಟನೆಯ ಕಾವು ದಿನೇ ದಿನೇ ಏರುತ್ತಿದೆ.
ನಮ್ಮಲ್ಲಿ
ಹೆಣ್ಣನ್ನು ಧರ್ಮಾತೀತವಾಗಿ ಗೌರವದಿಂದ ಕಾಣುವ ರೀತಿ-ರಿವಾಜುಗಳಿದ್ದರೂ ಇವೆಲ್ಲವನ್ನು ಗಾಳಿಗೆ ತೂರಿ
ಅನಿಯಂತ್ರಿತ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಇದು ದೇಶದಲ್ಲಿ ಬೆಳೆಯುತ್ತಿರುವ ಅತಿ ದೊಡ್ಡ
ಅಪರಾಧವೂ ಹೌದು. ಕಳೆದ ವರ್ಷ ಥಾಮಸ್ ರೀಟರ್ಸ್ ಪ್ರತಿಷ್ಠಾನ ನಡೆಸಿದ ವಿಶ್ವ ವ್ಯಾಪಿ ಸಮೀಕ್ಷೆಯ ಪ್ರಕಾರ
ಭಾರತ ಮಹಿಳೆಯರ ರಕ್ಷಣೆಯ ವಿಚಾರದಲ್ಲಿ ನಾಲ್ಕನೆಯ ಅಪಾಯಕಾರಿ ರಾಷ್ಟ್ರವೆಂಬ ಕಟು ಸತ್ಯ ನುಂಗಲಾಗದ
ತುತ್ತಾಗಿ ಪರಿಣಮಿಸಿದೆ. ದೇಶದ ಹಿತ ಕಾಪಾಡಲಿರುವ ಅಧಿ ನಾಯಕರು ಇತ್ತ ಕಡೆ ಗಮನ ಹರಿಸುತ್ತಿಲ್ಲವೇಕೆ?
NCRB (ನ್ಯಾಷನಲ್ ಕ್ರೈಂ ರಿಪೋರ್ಟ್ಸ್ ಬ್ಯೂರೋ) 2009ರ ವರದಿಯನ್ವಯ ಸುಮಾರು 21,397 ಪ್ರಕರಣಗಳು
ದಾಖಲಾಗಿವೆ. ಸೌಂತ್ ಇಂಡಿಯಾ ಸೆಲ್ ಫಾರ್ ಹ್ಯೂಮನ್ ರೈಟ್ಸ್ ನ ಅಧ್ಯಯನ ದೇಶದಲ್ಲಿ ನಿಮಿಷಕ್ಕೆ ಸರಾಸರಿ
34 ಅತ್ಯಾಚಾರಗಳು ನಡೆಯುತ್ತವೆ ಎಂಬ ದಂಗು ಬಡಿಸುವ ವಿವರಣೆ ನೀಡಿದೆ. ಇಂಟರ್ ನ್ಯಾಷನಲ್ ಮೆನ್ ಆಂಡ್
ಜೆಂಡರ್ ಇಕ್ವಾಲಿಟಿ ನಡೆಸಿದ ಸಮೀಕ್ಷೆ ಮೇರೆಗೆ ಭಾರತದ ನಾಲ್ಕರಲ್ಲಿ ಒಬ್ಬ ಪುರುಷ ಲೈಂಗಿಕ ದೌರ್ಜನ್ಯಯೆಸಗಿರುತ್ತಾನೆಂಬ
ಅಂಶ ಬಯಲಿಗೆಳೆದಿದೆ. ಈ ಎಲ್ಲಾ ಅಂಕಿ-ಅಂಶಗಳು ದೇಶದಲ್ಲಿ ನಡೆಯುತ್ತಿರುವ ಅತಿ ಕ್ರೂರ ಅಪರಾಧದ ಎಳೆ-ಎಳೆಯನ್ನು
ಬಿಡಿಸಿಡುತ್ತವೆ. ದೇಶ ವಿಭಜನೆಯ ಕಾಲದಲ್ಲಿ ಮಹಿಳೆಯರ ಅಪಹರಣ ಮತ್ತು ಅತ್ಯಾಚಾರ ವ್ಯಾಪಕವಾಗಿತ್ತು.
ಒಟ್ಟಾರೆಯಾಗಿ ದಲಿತ ಮಹಿಳೆಯರು ಹೆಚ್ಚು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಜಾತಿ ವ್ಯವಸ್ಥೆ ಇವರ ಅಳಲನ್ನು
ನಗಣ್ಯ ಮಾಡಿದೆ. ಉಗ್ರವಾದಿ ಸಂಘಟನೆಗಳಾದ ಹಿಜ್-ಬುಲ್-ಮುಜಾಹಿದ್ದೀನ್, ಜಮಾಯತ್-ಅಲ್-ಮುಜಾಹಿದ್ದೀನ್
ಕಾಶ್ಮೀರಿ ಪಂಡಿತರು ಪಲಾಯನ ಮಾಡಲು ಅತ್ಯಾಚಾರವನ್ನೇ ಅಸ್ತ್ರವನ್ನಾಗಿಸಿದರು. ಭಾರತೀಯರು ತಲೆ ತಗ್ಗಿಸುವಂತೆ
ಮಾಡಲು ಇನ್ನೆರಡು ಸಂಗತಿಗಳಿವೆ. ಮೊದಲನೆಯದು, 2006ರಲ್ಲಿ ರಾಜಸ್ಥಾನದಲ್ಲಿ ನಡೆದ ಜಪಾನ್ ಮಹಿಳೆ ಮೇಲಿನ
ಅತ್ಯಾಚಾರ, 2008ರಲ್ಲಿ ಗೋವಾದಲ್ಲಿ ನಡೆದ 15ರ ಬ್ರಿಟಿಷ್ ಯುವತಿ ಸ್ಕಾರ್ಲೆಟ್ ಮೇಲೆ ಆದ ಅತ್ಯಾಚಾರ
ಮತ್ತು ಹತ್ಯೆ ಪ್ರಕರಣ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಆಕೆಯ ತಾಯಿ ನ್ಯಾಯಕ್ಕಾಗಿ
ಎಷ್ಟು ಗೋಗರೆದರೂ ಪ್ರಯೋಜನವಾಗಲಿಲ್ಲ. ಪ್ರವಾಸಿ ತಾಣವಾದ ಗೋವಾದ ಹೆಸರಿಗೆ ಚ್ಯುತಿ ಬರುತ್ತದೆಂದು
ಪ್ರಕರಣವನ್ನು ಮುಚ್ಚಿಹಾಕಿದರು. ಎರಡನೆಯದು, ಜಮ್ಮು-ಕಾಶ್ಮೀರ ಸೇರಿದಂತೆ ಅಸ್ಸಾಂ, ಮಣಿಪುರದ ಗಡಿ
ಪ್ರದೇಶದಲ್ಲಿ ಭಾರತೀಯ ಸೇನೆಯ ಯೋಧರೂ ಅತ್ಯಾಚಾರಗಳಲ್ಲಿ ಭಾಗಿಯಾಗಿದ್ದಾರೆಂಬ ಆರೋಪವಿದೆ. ಹೀಗೆ ನಾನಾ
ದ್ವೇಷ-ವೈಷಮ್ಯ, ಮೋಜು, ಭಂಡತನಗಳಿಗೆ ಹೆಣ್ಣು ತುತ್ತಾಗುತ್ತಿರುವುದು ಆತ್ಮಾವಲೋಕನಕ್ಕೀಡು ಮಾಡಿದೆ.
ನಾಲ್ಕು
ವರ್ಷಗಳ ಹಿಂದೆ, ದೆಹಲಿಯಲ್ಲಿ ಪತ್ರಕರ್ತೆಯೊಬ್ಬಳು ಬೆಳಗ್ಗಿನ ಜಾವ 3:30ರ ಹೊತ್ತಿಗೆ ಸ್ವತಃ ಕಾರು
ಚಲಾಯಿಸಿಕೊಂಡು ಮನೆಗೆ ತೆರಳುವ ವೇಳೆ ಹತ್ಯೆಗೀಡಾದಳು. ಘಟನೆಯ ಕುರಿತು ಪ್ರತಿಕೃಯಿಸಿದ ಮುಖ್ಯ ಮಂತ್ರಿ
ಶೀಲಾ ದೀಕ್ಷಿತ್, ರಾತ್ರಿ ವೇಳೆ ಇಂತಹ ಸಾಹಸ ಮಾಡಿದ್ದೇ ತಪ್ಪು ಎಂದು ಬೇಜವಾಬ್ದಾರಿಯ ಹೇಳಿಕೆ ನೀಡಿ
ನುಣುಚಿಕೊಂಡರು. ಮತ್ತೇ ಅಲ್ಲೇ ಅರೆ-ವೈದ್ಯಕೀಯ ವಿದ್ಯಾರ್ಥಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.
ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದ ಸರ್ಕಾರ ಜನರ ಸಾಂಘಿಕ ಹೋರಾಟಕ್ಕೆ ಮಣಿದಿದೆ. ಅಧಿಕ ಸಂಖ್ಯೆಯ
ಪೊಲೀಸ್ ಕಣ್ಗಾವಲಿರುವ ದೆಹಲಿಯಲ್ಲೇ ಈ ವರ್ಷ ಸರ್ಕಾರಿ ದಾಖಲೆಗಳ ಪ್ರಕಾರ ಸುಮಾರು 660 ಅತ್ಯಾಚಾರ
ಪ್ರಕರಣಗಳು ಸಂಭವಿಸಿವೆ. ದೇಶದ ಪ್ರಥಮ ಪ್ರಜೆಯ ಚುಕ್ಕಾಣಿ ಮಹಿಳೆಯೊಬ್ಬರ ಕೈಯಲ್ಲಿದ್ದಾಗಲಾದರೂ ಈ
ಪಿಡುಗನ್ನು ಹೋಗಲಾಡಿಸಲು ಸೂಕ್ತ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಬೆಂಕಿ ಬಿದ್ದ ಮೇಲೆ ಬಾವಿ ತೋಡುವ
ಪ್ರವೃತ್ತಿ ಮುಂದುವರಿದಿದೆ. ಅತ್ಯಾಚಾರಕ್ಕೆ ಗರಿಷ್ಠ ಹತ್ತು ವರ್ಷಗಳ ಜೈಲು ಶಿಕ್ಷೆಯಿದ್ದು, ಇದೀಗ
ಕೇಂದ್ರ ಸರ್ಕಾರ ಮರಣ ದಂಡನೆ ಸೇರಿದಂತೆ ಕಾನೂನಿನಲ್ಲಿ ಬದಲಾವಣೆ ತರುವ ಅಭಿಪ್ರಾಯ ವ್ಯಕ್ತಪಡಿಸಿದೆ.
ರಾಜಧಾನಿಯಲ್ಲಿ ಪ್ರಕರಣ ನಡೆದಿರುವುದರಿಂದ ರಾಷ್ಟ್ರಾದ್ಯಂತ ಸಂಚಲನ ಉಂಟು ಮಾಡಿದೆ. ಮಾಧ್ಯಮಗಳು ಬೆನ್ನಿಗೆ
ಬಿದ್ದಿವೆ. ನ್ಯಾಯಕ್ಕಾಗಿ ಇನ್ನಿಲ್ಲದ ಹೋರಾಟ ನಡೆಯುತ್ತಿದೆ. ಆದರೆ ದೇಶದ ರಕ್ಷಣೆ ಮತ್ತು ಕಾನೂನುಗಳು
ಶ್ರೀಮಂತ ಮತ್ತು ಪ್ರಭಾವಿ ವಲಯಕ್ಕೆ ಬೇಕಾದ ಹಾಗೆ ಇದೆ ಹೊರತು ಅನ್ಯಾಯವನ್ನು ಮೆಟ್ಟಿ ನಿಲ್ಲುವ ಸ್ಥಿತಿಯಲ್ಲಿಲ್ಲ.
ಆದ್ದರಿಂದ ಅಮಾಯಕರು ಅತ್ಯಾಚಾರದ ವಿರುದ್ಧ ದನಿಯೆತ್ತಿದಾಗ, ಒತ್ತಡಕ್ಕೆ ಮಣಿದ ಪೊಲೀಸರು ಅನಪೇಕ್ಷಿತ,
ದಿಕ್ಕು ದೆಸೆಯಿಲ್ಲದ ಅಥವಾ ಸ್ಲಂ ವಾಸಿ ವ್ಯಕ್ತಿಯನ್ನು ಥಳಿಸಿ ಆರೋಪ ಒಪ್ಪಿಕೊಳ್ಳುವಂತೆ ಮಾಡುವುದಿಲ್ಲವೆಂದು
ಹೇಳಲಾಗದು.
ಕ್ಷುಲ್ಲಕ
ಕಾರಣಗಳಿಗೆ ದೌರ್ಜನ್ಯವೇ ಪರಿಹಾರವಲ್ಲ. ಹೆಣ್ಣಿನ ಜೊತೆ ಕ್ರೂರ ಮೃಗದಂತೆ ವರ್ತಿಸುವುದರಿಂದ ಅಥವಾ
ಪೌರುಷ ತೋರಿಸುವುದರಿಂದ ಸಮಾಜದಲ್ಲಿ ಘನತೆ ಎತ್ತರಕ್ಕೇನೂ ಬೆಳೆಯುವುದಿಲ್ಲ. ಒಂದು ಜೀವದ ಅಸ್ತಿತ್ವವನ್ನು
ಅನುಮಾನದಿಂದಲೇ ಪ್ರಶ್ನಿಸುವಂತೆ ಮಾಡುವ ಹಕ್ಕು ಯಾರಿಗೂ ನೀಡಿಲ್ಲ. ಲಿಂಗಾನುಪಾತದಲ್ಲಿ ಏರು-ಪೇರಾಗಿರುವುದು
ಅಥವಾ ಶಿಕ್ಷಣದ ಕೊರತೆ ಮಹಿಳೆ ವಿರುದ್ಥ ಕಾನೂನು ಬಾಹಿರ ಚಟುವಟಿಕೆಗೆ ಕಾರಣವಲ್ಲ. ಸನ್ನಡತೆ ಮತ್ತು
ಇಂದ್ರಿಯಗಳ ಮೇಲಿನ ಹತೋಟಿ ತುಂಬಾ ಮುಖ್ಯ. ಪ್ರಸ್ತುತ ದೆಹಲಿ ಪ್ರಕರಣದ ಕುರಿತಾಗಿ ರಾಷ್ಟ್ರೀಯ ಮಹಿಳಾ
ಆಯೋಗದ ಮಮತಾ ಶರ್ಮ ಆರೋಪಿಗಳ ಪುರುಷತ್ವ ಹರಣ (Chemical Castration) ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಒಂದು ವೇಳೇ ಇದೇ ಶಿಕ್ಷೆಯೆಂದು ಅಂತಿಮವಾದರೆ ಪುರುಷ ಸಮಾಜಕ್ಕೊಂದು ಕಪ್ಪು ಚುಕ್ಕೆ. ವಿದೇಶಿ ವ್ಯಾಮೋಹದಿಂದಾಗಿ
ಹೊಸ ಆಚಾರ, ಉಡುಪುಗಳು ಭಾರತದಲ್ಲಿ ಲಗ್ಗೆ ಇಟ್ಟಿವೆ. ಇದರಿಂದಾಗಿ ಕೆಲವು ಮೌಲಿಕ ಗುಣಗಳು ಮಾಯವಾಗಿವೆ.
ಯುವತಿಯರ ‘ನಾವು ಯಾವ ಬಗೆಯ ಬಟ್ಟೆ ತೊಟ್ಟರೇನು? ನೋಡುಗರ ದೃಷ್ಟಿಕೋನ ಬದಲಾಗಬೇಕಿದೆ’ ಎಂಬ ವಾದ ಸಮಂಜಸವೆ
ಇರಬಹುದು. ಆದರೆ ಕಾಮ, ಕ್ರೋಧ, ಲೋಭ ಮೊದಲಾದ ಅರಿಷಡ್ ವೈರಿಗಳ ನಿಗ್ರಹ ಕಷ್ಟ, ನಿಯಂತ್ರಿಸಬಹುದಷ್ಟೆ.
ಸಮಾಜ ಅತ್ಯಾಚಾರದ ನಂತರ ಹೆಣ್ಣನ್ನು ಉಪಚರಿಸುವ ರೀತಿಯೇ ಬೇರೆಯದಾಗಿರುತ್ತದೆ. ಇದನ್ನೆಲ್ಲಾ ಮನಗಂಡು
ಪ್ರಚೋದನಾತ್ಮಕವಾಗಿ ವ್ಯವಹರಿಸದೇ ಇದ್ದರೆ ಒಳಿತು. ಇನ್ನು ಟಿ,ವಿ., ಸಿನಿಮಾ ಮಾಧ್ಯಮಗಳಲ್ಲಿನ ಅಸಭ್ಯತೆ,
ಅಂತರ್ಜಾಲದಲ್ಲಿ ಧಾರಾಳ ಸಿಗುವ ಅಶ್ಲೀಲ ಚಿತ್ರಗಳು, ಜಾಹೀರಾತುಗಳು ಕುಕೃತ್ಯಕ್ಕೆ ಎಡೆ ಮಾಡಿ ಕೊಡುತ್ತಿವೆ.
‘ಡಕಾಯಿತಿ ರಾಣಿ’ ಪೂಲನ್ ದೇವಿ, ವಿಶ್ವದ ಪ್ರಭಾವೀ ವ್ಯಕ್ತಿಗಳ ಸಾಲಿನಲ್ಲಿ ನಿಂತಿರುವ ಅಮೇರಿಕದ ಒಪ್ರಾಹ್
ವಿನ್ ಫ್ರೇ ಯ ತೆರೆಯ ಹಿಂದಿನ ಬದುಕಿನಲ್ಲಿ ಅತ್ಯಾಚಾರಕ್ಕೆ ಗುರಿಯಾಗಿದ್ದರೆಂಬ ನಂಬಲಾಗದ ಸಂಗತಿಗಳಿವೆ.
ಅದೇನೇ ಇರಲಿ, ಹೆಣ್ಣು ಅಬಲೆಯಲ್ಲ, ಸಬಲೆಯೆಂಬ ರಣ ಕಹಳೆ ಮೊಳಗಬೇಕಿದೆ. ಭಾರತದಲ್ಲಿ ನಡುರಾತ್ರಿ ಮಹಿಳೆ
ಸ್ವತಂತ್ರವಾಗಿ ಓಡಾಡುವಂತಾಗಬೇಕೆಂಬ ಗಾಂಧೀಜಿಯವರ ಆಶಯ ಹುಸಿಯಾಗಿದೆ. ಅವರೀಗ ಇರುತ್ತಿದ್ದರೆ ಎಷ್ಟು
ನೊಂದುಕೊಳ್ಳುತ್ತಿದ್ದರೋ ಏನೋ ?
Deevatige by Sandeep Phadke is licensed under a Creative Commons Attribution-NonCommercial-NoDerivs 2.5 India Licens
Comments